Sunday, September 26, 2010

ಎರಡು - ಮಾತು

ದೀಕ್ಷೆ

ಹನಿ ಹನಿಸಿದಾಗ ಮಡು
ತುಂಬಿ ಬಂದಾಗ ನೆಡು
ಗಿಡ ಬಳ್ಳಿ ಹಸಿರಾಗಲಿ ಕಾಡು
 ತೊಡು ದೀಕ್ಷೆ, ಬಿಡು ನಿರೀಕ್ಷೆ

ನೀನು, ನಿನ್ನವರಿಗಿದು ಪರೀಕ್ಷೆ

ಚಲಿಸಿ ಬಿಡದೆಭುವಿ ತನ್ನಾಕಕ್ಷೆ



ಇಲ್ಲಗಾವಲು ಹಸಿರು ಬರೀ ಸೀಳು

ಗೋಮಾಳವಿಲ್ಲ ಆಗಿ ಎಲ್ಲ ಗೋಳು

ಹೊಗೆ ಪ್ರದೂಷಣೆ ಹಾಳು ಹಾಳು


ನೀರಿಲ್ಲ ಎಲ್ಲೆಡೆ ನೀರ್-ಮಲ

ಪ್ರಾಣವಾಯು ಆಗಿ ವಿಷಾನಿಲ

ತಲ-ಜಲ-ಚರ ಒದ್ದಾಡಿ ವಿಲವಿಲ


ಸೂರ್ಯ ಶಕ್ತಿ

ಕೂಡಿಟ್ಟರೆ ಹನಿ

ಆಗುವುದು ಖನಿ

ಒಂದೊಂದೇ ದನಿ

ಕೊಳ್ಳಲಿ ಮಾರ್ದನಿ

ಮನೆಯಾಗಿ ಮೊದಲು

ಬೀದಿ ಮಾಡಿ ನಕಲು

ಎಲ್ಲ ಒಂದಾಗಿ ಮಾಡಲು

ಉಕ್ಕಿಹರಿವುದು ಹೊನಲು

ವಿವೇಚಿಸಿ ಉಪಯೋಗಿಸಲು

ನಿಸರ್ಗದತ್ತ ಸೂರ್ಯನ ಬಿಸಿಲು

Friday, September 17, 2010

ಸಸ್ಯವನದಲ್ಲಿ ಬ್ಲಾಗೋತ್ಸವ












ಸಸ್ಯವನದ ಸೊಬಗಿನಲ್ಲಿ ಬ್ಲಾಗಿಗರ ಬಳಗದಲ್ಲಿ

ಅರ್ಕಾವತಿ ಹರಿಯುವಲ್ಲಿ ಸಸ್ಯಗಳ ನೆಟ್ಟೆವಲ್ಲಿ
ಈಶ್ವರರ ಸಾಂಗತ್ಯದಲ್ಲಿ ಸಸ್ಯವನದ ತಂಪಿನಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ..
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ
ಪಕ್ಕುಮಾಮನ ಸಾರಥ್ಯದಲ್ಲಿ ಶಿವುಛಾಯಾಲೋಕದಲ್ಲಿ
ಪರಾಂಜಪೆ ದೇಸಾಯರ ಗಂಭೀರ ಚರ್ಚೆಗಳಲಿ
ಈಶ್ವರರ ಸಸ್ಯಜ್ಞಾನ ಹುಡುಗರ ಹುಡುಕಾಟದಲಿ
ಬ್ಲಾಗತ್ಸವ ನಮ್ಮ ಬ್ಲಾಗೋತ್ಸವ
ಅನಿರಾಘು ನವೀನ್ ಶಿಪ್ರ ಗುರುಮಹೇಶಸುಗುಣರೊಂದಿಗೆ
ದಿಲ್ಪ್ರಗತಿ ವಸುದೇಶ ವಿದ್ಯಾ ಆಶಶೀಶ್ ಪ್ರಶಾಂತ ವೈದ್ಯ
ಚೇತು ನಂಜುಂಡ್ ಒಡನಾಟದಲ್ಲಿ ಜಲನಯನದ ಉಪವಾಸದಲ್ಲಿ
ಬ್ಲಾಗೋತ್ಸವ ನಮ್ಮ ಬ್ಲಾಗೋತ್ಸವ

Thursday, August 5, 2010

ಮತ್ತೆ ಕೆಲವು ನ್ಯಾನೋಗಳು.......

Why ಯಾರೀ?



ಬಲು ಜೋರು ಬಾಲೆ ಎರಡು ಜಡೆ ಹೂಮಾಲೆ
ಜಿಂಕೆಯಂತೆ ಜಿಗಿದವಳು ಓಹ್ ! ಓಲಾಡೋ ಓಲೆ

 

ಕಣ್ಣಿನಲಿ ತುಂಟತನ ಅದರೂ ಇಲ್ಲ ಮೊಂಡುತನ
ಹೆಣ್ಣಿನಂದ ತುಂಬಿದ ಗಲ್ಲ ಅಲ್ಲಿಗಲ್ಲಿಗೆ ಚೆಲ್ಲುತನ

ಬೆಳೆದು ಬಲುವೈಯಾರಿ ಸಿಂಗರಿಸೆ ಸಿಂಗಾರಿ
ಛೇಡಿಸೆ ಹುಸಿಗೋಪ ಕೆನ್ನೆಗೆ ಚಲ್ಲಿದಂತೆ ಕೇಸರಿ

ಹಳ್ಳಿಹಾದಿ ಅಜ್ಜಿ ಮನೆ ಬಾವಿನೀರಿಗೆ ಬಂದ ವೈಯಾರಿ
ಬಳುಕು ನಡು, ನೀಳ ಜಡೆ, ನೀರು ಹೋಗುತ್ತಿದೆ ಸೋರಿ

ಅವಳಾ ನೋಟ ಹೊನ್ನ ಮೈಬಣ್ಣ ಎಲ್ಲರ ಗೆಲ್ಲುವಾಸೆ
ಮುದಿ ಗೌಡ ಜಗುಲಿ ಮೇಲೆ, ನೋಡಿ ಕುಣಿಯಿತು ಮೀಸೆ

ಕೇಳಿದ್ರೆ ಹೇಳ್ತಾನೆ ಮುಪ್ಪಾದ್ರೂ ಹುಳಿಯಲ್ವೇ ಹುಣಿಸೆ
ಇದ ಕೇಳಿ ಗೌಡ್ತಿ ತಂದು ತೋರ್ಸಿದ್ಲು ಹಳೆ ಪೊರಕೆ ವರಸೆ

Sunday, August 1, 2010

ಸ್ನೇಹಿತ


(ಸ್ನೇಹಿತರ ದಿನದಂದು ನನ್ನ ಬಾಲ್ಯದ ಗೆಳೆಯನ ನೆನಪಲ್ಲಿ)

ಅವನಲ್ಲಿ ನಾನಿಲ್ಲಿ ಆದರೂ ನಮ್ಮಲ್ಲಿಲ್ಲ ದೂರ


ಅವನಿದ್ದ ನನ್ನ ಜೊತೆ ಇದ್ದಾಗಲೂ ನಾನು ಪೋರ



ಮಾಸ್ತರು ಹಾಜರಿಗೆ ಅವನದಾಯ್ತು ಜವಾಬು

ಎಂದೋ ಸತ್ತಿದ್ದ ನನ್ನ ತಾತ ಸತ್ತ ಎಂದ ಸಬೂಬು



ಸ್ಕೂಲಿಂದ ಬರುವಾಗ ತೋಪಿಗೆ ನುಗ್ಗಿದ್ದು ಮಾವಿಗೆ

ಮಾಲಿ ಬಂದಾಗ ನನ್ನ ಬದಲಿಗೆ ತಾನೇ ಸಿಕ್ಕಿದ್ದ ಪೆಟ್ಟಿಗೆ



ತುಂಟಾಟಮಾಡಿ ಸಿಕ್ಕಿಬಿದ್ದೆ, ಬೆತ್ತ ಬಿತ್ತು ಛಟೀರ್-ಕೈಗೆ

ಅಯ್ಯೋ ಎಂದಿದ್ದ ಗೆಳೆಯ ಬಿದ್ದಂತೆ ಏಟು ತನ್ನ ಮೈಗೆ



ಹತ್ತರಲ್ಲಿ ಪ್ರಥಮ ದರ್ಜೆ ಸಿಕ್ಕಿದ್ರೂ ಪೆಚ್ಚಾಗಿ ಬಂದ್ರೆ - ನಾನು

ಊರಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದ ತಾನೇ ಗೆದ್ದಂತೆ ಅವನು

Tuesday, July 20, 2010

ಮಗುವಿರಬೇಕು

ಪ್ರತಿ ಮನದಲಿ ಒಂದು ಮಗುವಿರಬೇಕು



ಮನ ಕಲಕು, ಮೆಲುಕು ಪಲುಕುತಿರಬೇಕು


ನಗು ಒಳಿತಿಗೆ ಕೆಡಕಿಗೂ ಉಕ್ಕುತಿರಬೇಕು


ಅದ ಅರಿತಂತಿದ್ದೂ ಮರೆಯುವಂತಿರಬೇಕು



ಅಪ್ಪ ಅಮ್ಮಗೆ ಚುಮ್ಮ ಕೊಡುತಿರಬೇಕು


ಬೆಳೆದರೂ ಬಲಿತರೂ ತುಂಬೊಲವಿರಬೇಕು


ಅಣ್ಣನಾದರೂ ತಮ್ಮ ಅಕ್ಕನಾದರೂ ತಂಗಿ


ಎಲ್ಲಬಲ್ಲವನಾದರೂ ಅರಿಯದಂತಿರಬೇಕು



ತುಂಬು ಮನದ ನಿರ್ಮಲ ಮಗುವಿನ ನಗುವಿರಬೇಕು


ಸಹಾಯ ಬೇಡದೆಯೂ ಎಲ್ಲರಿಗೆ ಸಿಗುತಿರಬೇಕು


ತನ್ನಳಲ ಬಿಸಿಲಲ್ಲಿಟ್ಟುಸುಟ್ಟು ನೆಚ್ಚಿದವರಿಗೆ ನೆಳಲ


ಬಿಳಲು ಬಿಟ್ಟು ತಂಪನೆರೆವ ಹರಡಿದಾಲದಂತಿರಬೇಕು



ಕರೆಯದೇ ಬರುವ ಆಪತ್ತಿಕಾದವನಂತಿರಬೇಕು


ಮರೆಯದೇ ನೆನೆವ, ಕೊಟ್ಟದ್ದ ಮರೆತಂತಿರಬೇಕು


ಉರಿವ ಧೂಪ, ತೇಯ್ವ ಸುಗಂಧದಂತಿರಬೇಕು


ಇರಬೇಕು, ಇರಬೇಕು ಪ್ರತಿ ಮನದಲ್ಲೂ ಮಿಡಿವ


ಮುಗ್ಧ, ತುಂಬು ನಗುವಿನ ಮಗುವಿರಬೇಕು.

Saturday, June 5, 2010

ಏಕೆ ?ತಿಳಿಯದಾಗಿದೆ

ಮಳೆ ಬಂದು ನಿಂತ ಮೇಲೆ ಎಲ್ಲ ತಣ್ಣಗಾಗಿದೆ...



ಮರವೂ ಇಲ್ಲ ಹನಿಯೂ ಇಲ್ಲ ಎಲ್ಲಾ ಬೋಳಾಗಿದೆ...


ಬಿದ್ದ ಹನಿಗೆ ಗುದ್ದು ತಿಂದ ಮಣ್ಣು ಅಲುಗಾಡಿದೆ


ಶುಭ್ರ ಹರಿವನದಿ ಬೆಟ್ಟದಿಂದ ಬಗ್ಗಡ ಹೊತ್ತು ಹೊರಟಿದೆ




ದಾರಿಯಲ್ಲಿ ಸಿಕ್ಕಿಬಿದ್ದೆ ಹನಿಬಿತ್ತು ತಲೆಯಮೇಲೆ


ತಣ್ಣನೆಯ ಅನುಭವ ಇಲ್ಲ ಬರಬಹುದೇ ಖಾಯಿಲೆ


ಗಾಳಿಯಲ್ಲಿ ತೇಲುತಿದ್ದ ಧೂಳು ಕ್ರಿಮಿ ಇತ್ತುಮೊದಲೆ


ನಮ್ಮ ಗೋರಿ ನಾವೇ ತೋಡಿ ಅತ್ತು ಕರೆವ ಮೊದಲೇ




ಪರಿಸರ ನೋಡಲಿಲ್ಲ ಹುಚ್ಚು, ಬರೀ ಸರ-ವೇ ಕಂಡಿತಲ್ಲ


ಡಾಂಬರು ಹಚ್ಚಲು ಮರವ ಉರುಳಿಸಿ ಹಣ್ಣ ಬಯಸು ಸಲ್ಲ


ಹಾದಿ ಬದಿಲಿ ಬಾಯಾರಿ ಬರಲು ನೀರು ಬೇಡ ನೆರಳೂ ಇಲ್ಲ


ಆಳುದ್ದ ಬಾವಿ ಬಲು ನೀರು, ಈಗ ತೋಡಿ ಬರೀ ಬೆವರೇ ಎಲ್ಲಾ


ಪಾತಾಳ ಸೇರೆ ಬಾವಿ ಬೋರು, ನೀರಿಲ್ಲ ಮಗುವೇ ಬಿದ್ದಿತಲ್ಲಾ




ಕಾಡ ಕಡಿದು ಹಲ-ಹಲಗೆ ಮಾಡಿ, ಬೇಟೆಯಾಡಿ ಕೊಂದೆವು


ಹುತ್ತ ಹೊಡೆದು ಹಾವ ಸಿಗಿದು ಚೀಲಮಾಡಿ ಬೆಲ್ಟು ಮಾಡಿಕೊಂಡೆವು


ಹೊಲದಲಿ ಹೆಗ್ಗಣ ಪಿಡುಗಿಗೆ ಸುಲಭವೆಂದು ಪಾಶಾಣ ಹಾಕಿ ಕೊಂದೆವು


ಸೊಳ್ಳೆ ನೊಣ ಕ್ರಿಮಿ ಕೀಟಕೆ ಎಂಡೋಸಲ್ಫಾನ್ ಡಿ.ಡಿ.ಟಿ ತಂದೆವು


ಕಲುಷಿತ ಹುಲ್ಲು, ಗೋವಿನ ಹಾಲು, ತಾಯ ಮೊಲೆಗೂ ಕೊಟ್ಟೆವು




ಇದ್ದುದರಲ್ಲಿ ತೃಪ್ತಿಪಡುವ ಮನಸೇಕೆ ಇಲ್ಲದಾಗಿದೆ ?


ಜಾತಿ ಮತ, ಹಣ-ಅಧಿಕಾರದಾಸೆ ಏಕೆ ಪ್ರಧಾನವಾಗಿದೆ?


ನನ್ನಜನ, ನನ್ನ ಮನೆ, ನನ್ನಮಕ್ಕಳು ಕೊನೆಗೆ ನಾನೇ ಏಕಾಗಿದೆ?


ತಾನೇ ಎಂದು ಮೆರೆದವರು ಮಣ್ಣಾದರೆಂದು ಏಕೆ ತಿಳಿಯದಾಗಿದೆ?

Sunday, May 16, 2010

ಮತ್ತೆ-ಕೆಲವು ಚುಟುಕು-ಗುಟುಕು

ಮುತ್ತು-ಮತ್ತು

ಕೊಟ್ಟರೆ

ಮುತ್ತು

ಬರುವುದು

ಮತ್ತು



ರಸ-ವಿರಸ
ಸಮರಸ

ಆದರೆ..ಗಂಡ-ಹೆಂಡತಿ

ಬರೀ ವಿರಸ

ಆದರೆ..ಪ್ರಾಣ ಹಿಂಡುತೀ



ಬದಲಾವಣೆ

ನಮ್ಮನೆ ನಾಯಿ ಬೆಕ್ಕು

ಈ ಮಧ್ಯೆ ಕಚ್ಚಾಡ್ತಿಲ್ಲ

ಕೇಳ್ದೇ..ಯಾಕೋ ಗೊತ್ತಾಗ್ತಿಲ್ಲ

ನನ್ನವಳು ಹೇಳಿದ್ಲು

ಡೈಲಿ ಟೀವೀಲಿ ನೋಡ್ತಾವಲ್ಲ
ವಿಧಾನ-ಸಂಸತ್ ಸಮಾಚಾರಾನೆಲ್ಲ