Tuesday, February 23, 2016

ಪುಸ್ತಕಗಳು

(ಚಿತ್ರ: ಅಂಕೆಘಟ್ಟದ -ಅಂಕೆಗೌಡರ "ಪುಸ್ತಕಮನೆ")

ಪುಸ್ತಕಗಳು
*********
(ಹೆಸರಾಂತ ಹಿಂದಿ ಕವಿ – ಶ್ರೀ ಗುಲ್ಜಾರ್ ರವರ “ಕಿತಾಬೇಂ” ಕವನದ ಭಾವಾನುವಾದ)

ಪುಸ್ತಕಗಳು ಇಣುಕುತಿವೆ
ಮುಚ್ಚಿದ ಕಪಾಟುಗಳ ಗಾಜುಗಳ ಮೂಲಕ
ಬಲು ಆಸೆಯಿಂದ ದಿಟ್ಟಿಸುತಿವೆ.
ಮಾಸಗಳುರುಳಿದರೂ ಮಿಲನದೂರ-
ಅವುಗಳ ಸಂಗದಲಿ ಕಳೆದ ಆ ಸಂಜೆಗಳು,
ಈಗ ಹಾಗೇ ಕಳೆದುಹೋಗುತಿವೆ
ಕಂಪ್ಯೂಟರಿನ ಪರದೆಯ ಮೇಲೆ
ಬಲು ಚಡಪಡಿಸುತಿವೆ ಪುಸ್ತಕಗಳು, ಇವಕೆ
ಈಗ ನಿದ್ದೆಯಲಿ ನಡೆಯುವ ಅಭ್ಯಾಸವಾಗಿಬಿಟ್ಟಿದೆ.

ಪುಸ್ತಕಗಳು
ಶಕ್ತಿಗುಂದುವುದಿಲ್ಲವೆನುತ ತಾ
ಸಾರಿದ ಮೌಲ್ಯಗಳು – ಮೌಲ್ಯಗಳಾಗಿ
ಉಳಿದಿಲ್ಲ ಈಗ ಮನೆಗಳಲಿ
ಕಳಚಿಕೊಂಡಿವೆ ಇಂದು ತಾ ಸಾರಿದ ಸಂಬಂಧಗಳು,
ನಿಟ್ಟುಸಿರೊಂದು ಬಿಡಿಸಿಕೊಂಡಿತು ನಾ
ಪುಟವೊಂದು ಮಗುಚಲು, ಅಲ್ಲಿ
ಕೆಳಗುರುಳಿವೆ ಹಲ ಪದ ಅರ್ಥಗಳು,
ಮರದ ತುಂಡಿನಂತೆ ಇಲ್ಲದಂತೆ ಎಲೆಗಳು,
ಇನ್ನು ಅರ್ಥ ಬೆಳೆಯದಂತೆ,
ಹಲ ಪರಂಪರೆಗಳು ಹರಡಿದಂತೆ,
ಮಣ್ಣಿನ ಕುಡಿಕೆಗಳ ಮುರಿದ ತುಂಡುಗಳಂತೆ,
ಹಳತಾದ ನನ್ನ ಗಾಜಿನ ಲೋಟದಂತೆ.

ಪುಸ್ತಕಗಳ
ಪ್ರತಿ ಪುಟದ ತಿರುವು
ತರುತ್ತಿರಲಿಲ್ಲವೇ ಒಂದು ಘಮ ನಾಲಗೆಗೆ?
ಈಗ ಬೆರಳ “ಕ್ಲಿಕ್ಕಿ”ಸುವಿಕೆ..
ಪರದೆಗೆ ತರುವುದು ಚಿತ್ರಪ್ರವಾಹ
ಹರಡಿ ಪರದೆಯಮೇಲೆ ಪದರ ಪದರ, ಈಗ...
ಕಡಿದುಬಿದ್ದಿದೆ ಪುಸ್ತಕಗಳೊಂದಿಗೆ ಒಮ್ಮೆ ಇದ್ದ ಬಂಧ,
ಎದೆ ಮೇಲೆ ಮಗುಚಿಟ್ಟು ಪುಸ್ತಕವ ಮಲಗುತ್ತಿದ್ದ ಚಂದ,
ಅಥವಾ, ಹಾಗೇ ಮಡಿಲಲ್ಲಿಟ್ಟು,
ಇಲ್ಲವೇ ಮಂಡಿಮೇಲೆ ಕಸರತ್ತು,
ತಲೆತಗ್ಗಿಸಿ ಪ್ರಾರ್ಥಿಸುವಂತಿತ್ತು.
ದಿಟವೇ, ಜ್ಞಾನ ಜಗತ್ತು ಈಗಲೂ ಜೀವಿತವೇ.
ಆದರೆ, ಪುಟಗಳಲಿ ಅಡಗಿಸಿಟ್ಟ
ಚಪ್ಪಟೆಯಾದ ಆ ಹೂಗಳನು,
ಆ ಸುಂದರ ನವಿಲುಗರಿಗಳನು,
ಆ ಕೊಡುವ, ತೆಗೆದುಕೊಳ್ಳುವ,
ಬೀಳಿಸುವ, ಎತ್ತಿಕೊಳ್ಳುವ
ಪ್ರೀತಿಯ ನೆಪಗಳನು
ಮರೆಯುವುದೆಂತು?
ಬಹುಶಃ, ಮರೆಯುವುದಿಂತು.

10 comments:

  1. ಗಣಕಯಂತ್ರ ಹಾಗೂ ಅಂತರ್ಜಾಲದ ಅನ್ವೇಷಣೆಯ ಪರಿಣಾಮದಿಂದ ಜನ ಮಾನಸದಲ್ಲಿ ಪುಸ್ತಕದ ಮೇಲಿನ ಧೋರಣೆಯನ್ನು ಬಲು ಸೊಗಸಾಗಿ ಅಕ್ಷರಿಸಿದ್ದಾರೆ ಕವಿ ಶ್ರೀ.ಗುಲ್ಜಾರ್ ಸಾಹೇಬರು. ಕವಿ ಮನ ಹೇಗೆ ಪ್ರತಿಯೊಂದು ನಿರ್ಜೀವ ವಸ್ತುವಿಗೂ ಸ್ಪಂದಿಸುತ್ತಾರೆಂಬುದಕ್ಕೆ ಕನ್ನಡಿ ಹಿಡಿದಂತಿದೆ. ಈ ಅದ್ಭುತ ಕವನವನ್ನು ಕನ್ನಡೀಕರಿಸಿದ ನಿಮಗೂ ವಿಶೇಷ ಧನ್ಯವಾದಗಳು ಆಜಾದ್

    ReplyDelete
  2. ಧನ್ಯವಾದ ಶ್ರೀಮನ್

    ReplyDelete
  3. ನಾನಂತು ಅದೆಷ್ಟು ಹೂ, ಚಾಕಲೇಟ್ ಪೇಪರ್ ಗಳನ್ನು ಪುಸ್ತಕದಲ್ಲಿಟ್ಟುಕೊಂಡಿರುತ್ತಿದ್ದೆನೋ ಎಲ್ಲ ನೆನಪಾಯಿತು ಈ ಕವನದಿಂದ :) . ನಿಜ ಈಗ ಕಂಪ್ಯೂಟರ್ ಪರದೆಯಲ್ಲಿ ಓದುವ ಕೆಲಸ ಪುಸ್ತಕಗಳ ಬಳಕೆ ಈಗೀಗ ಕಡಿಮೆಯಾಗುತ್ತಿದೆ. ಚೆಂದದ ಕವನ ಸರ್.

    ReplyDelete
  4. ಧನ್ಯವಾದ ಮನಸು..ಮೇಡಂ...ಈ ಮೂಲ ಕವನ ನೋಡಿದಾಗ ನನಗೆ ಮೊದಲು ನೆನಪಾಗಿದ್ದು ಅಂಕೆಗೌಡರ ಪುಸ್ತಕ ಮನೆ... ನಿಜಕ್ಕೂ ನನಗೆ ಒಂದು ಪುಸ್ತಕ ಪೂರ್ತಿ ಓದಿ ದಶಕಗಳೇ ಕಳೆದಿವೆ...

    ReplyDelete
  5. ಅದ್ಭುತ ವರ್ಣನೆ! ನಿಜ, ಪುಸ್ತಕಗಳು ಮಸ್ತಿಷ್ಕಕ್ಕಷ್ಟೇ ಅಲ್ಲ ಮನಸ್ಸಿಗೂ ಮುದ ಹಾಗೂ ಮರೆಯಲಾಗದ ನೆನಪುಗಳನ್ನು ನೀಡುತ್ತಿದ್ದವು.. ಟೊಪ್ಪಿ ತೆಗೆದೆ ದೊಡ್ಡಣ್ಣ (Hats off I meant ;) )

    ReplyDelete
    Replies
    1. ಧನ್ಯವಾದ ತಮ್ಮ...ಬ್ಲಾಗ್ ನೋಡಿ ನಿನ್ನ ಅಭಿಮಾನದ ಮಾತಿಗೆ/ಪ್ರತಿಕ್ರಿಯೆಗೆ...

      Delete
  6. ಪುಸ್ತಕ ಜ್ಞಾನವೇ ಜ್ಞಾನ.. ಈ ಜಂಗಮ ವಾಣಿಯ ನೋಟಗಳು ಕೇವಲ ಕೇವಲ ಅಷ್ಟೇ
    ಪುಸ್ತಕಗಳು ಕೊಡುವ ಮಜವೇ ಮಜಾ..
    ನೀವು ಹೇಳಿರುವ ಪುಸ್ತಕದೊಳಗೆ ಇಡುವ ಎಲೆಗಳು, ಚಿಟ್ಟೆಗಳ ರೆಕ್ಕೆಗಳು, ನವಿಲು ಗರಿ ಆಹಾ ಅದೊಂದು ಅದ್ಭುತ ಅನುಭವ

    ಸುಂದರ ಕವಿತೆ (ಮೂಲ ಓದಿಲ್ಲ.. ಆದರೆ ನಿಮ್ಮ ಮಸ್ತಕದಿಂದ ಹೊರಬಂದ ಪುಸ್ತಕಗಳ ಬಗೆಗಿನ ಅನುವಾದ ಮೂಲವನ್ನು ಓದಿದಷ್ಟೇ ಕುಶಿಯಾಯಿತು)

    ಇದಕ್ಕೆ ಕಲಶ ಇಟ್ಟಂತೆ ಶ್ರೀ ಅಂಕೇಗೌಡ ಅವರ ಪುಸ್ತಕ ದೇಗುಲದ ಚಿತ್ರ ಸೂಪರ್ ಸೂಪರ್


    ಸೂಪರ್ ಸರ್ಜಿ.. ಬ್ಲಾಗ್ ಲೋಕ ಮತ್ತೆ ಜೀವಂತ ಆಗುತ್ತಿದೆ..

    ಸೂಪರ್ ಸೂಪರ್

    ReplyDelete
    Replies
    1. ಶ್ರೀಮನ್ ಅದೊಂದು ಅದ್ಭುತ ಻ಅನುಭವವಾಗಿತ್ತು ಅಂಕೆಗೌಡರ ಪುಸ್ತಕಮನೆ.. ಈ ಪ್ರಯತ್ನಕ್ಕೆ ಮೂಲ ಕಾರಣ ಶ್ರೀಪಾದಮಂಜುನಾಥಣ್ಣ...

      Delete
  7. ಪುಸ್ತಕ-ಓದು ಮಾಯವಾಗುತ್ತಿರುವ ಈ ಸಮಯದಲ್ಲಿ ಗುಲಝಾರರ ಈ ಕವನ ಮನಸ್ಸನ್ನು ಕದಡುತ್ತದೆ. ನಿಮ್ಮ ಕನ್ನಡ ಗೀತೆ ಸಮರ್ಥವಾಗಿ ಮೂಡಿದೆ.

    ReplyDelete
  8. ಧನ್ಯವಾದ ಸುನಾಥಣ್ಣ.... ಒಂದು ತೊದಲು ಪ್ರಯತ್ನ ಅಷ್ಟೇ.. ಆ ಮೇರು ಲೇಖಕರ ಎದುರು ನಾನು ಬಚ್ಚಾ...

    ReplyDelete