Sunday, December 25, 2011

ಚಿತ್ರ: ದಿಗ್ವಾಸ್ ಹೆಗಡೆ

ಸಾವಿಗೇಕೆ ಆಹ್ವಾನ
ಬೆಳ್ಮುಗಿಲ ಬೆಳಕಲ್ಲಿ
ಕಿರಣದಾವರಣ ಹೀಗೇ
ಇಣುಕಿದ ಪರಿಯೇನು?
ಹರಿದಾವರಣ ಕಿರಿದಾಗೆ
ಕಿರಣವಿರದು ರಣಬಿಸಿಲು
ಹರಿತಿಗೂ ಸಿಗದು ಉಸಿರು

ನೆಲ ಜಲಕೆ ಹಾ-ತೊರೆದು
ಕೆರೆಯಂಗಳ ಬಾಯ್ಬಿರಿದು
ಬಿಲ ಬಿಟ್ಟು ಹೊರ ಬಂದಾವು
ಇಲಿಯ ಬೆಂಬತ್ತಿ ಹಸಿದ ಹಾವು
ಮರ ಕಡಿದು, ನೆಲ ಬಗೆದು
ಬರಮಾಡಿಕೊಳ್ಳಬೇಡಿ ಸಾವು

Friday, December 16, 2011



ಛಾಯಾ ಚಿತ್ರ: ರಂಜಿತಾ ಹೆಗಡೆ


ಉದಯರವಿ
ಉದಯಿಸಿಹ ರವಿಯ ನೋಡು ಹೇಗೆ ಕೆಂಪು ಮೂಡಿದೆ
ಗಗನದಾಚೆ ಪೂರ್ವಾಂಗಣದಿ ಕೆಂಪು ನೀರು ಚಲ್ಲಿದೆ
ಕಿರಣ ಹರಡಿ ಬಾನಂಗಳದಲಿ ಹೊಂಬಣ್ಣವ ಸುರಿಸಿದೆ
ಕಲಕಲರವದಿ ಹರಿವನದಿ ದೇಗುಲ ಘಂಟೆ ಮೊಳಗಿದೆ

ಮೋಡವೆರಡೋ ಮೂರೋ ಧೈರ್ಯತುಂಬಿ ನಿಂತಿವೆ
ಒಡಲಾಳದಿ ಹನಿಗಳೆರಡ ಬಸಿರ ಬಯಕೆ ಹೊಂದಿವೆ
ಬೆಳಗಿನ ತಣ್ಣನೆಯ ಗಾಳಿ ತಾಗಿ ಮೋಡ ಭಾರವಾಗಿವೆ
ಹೀಗೇ ಹಲವು ಕೂಡಿ ಒಮ್ಮೆ ಭೂಮಿತುಂಬಾ ಹನಿಸಿವೆ

ಹನಿಯ ಕುಡಿದ ಮಣ್ಣು ತಾನೂ ಬೀಜ ಫಲಕೆ ಕಾದಿದೆ
ಬೀಜ ಬಿರಿದು ಮೊಳಕೆಯೊಡೆದು ಸಸಿತಲೆಯ ಎತ್ತಿದೆ
ಸಸಿಯೂ ಸವಿದು ನೀರಧಾರೆ ಬೆಳೆದು ಹೆಮ್ಮರವಾಗಿದೆ
ಮರಗಳೆಷ್ಟೋ ಭೂಮಿಗಪ್ಪಿ ಹಸಿರ ಹೊದಿಕೆಯಾಗಿದೆ

ಬೇಡ ಮನುಜ ಭೂಮಿ ಕಣಜ ಬಗೆದು ಖನಿಜದ ಆಸೆಗೆ
ಮಣ್ಣ ಕೊರೆತ ಮರಕೆ ಹೊಡೆತ ಬೀಳುವುವೆಲ್ಲ ಭೂಮಿಗೆ
ಹರಿವನದಿ ಕೊರೆವ ಬದಿ ನೆರೆಹಾವಳಿ ಸತತ ಬದುಕಿಗೆ
ಮೋಡಮಾಯ ಕಾಡುಮಾಯ ಸುಡಲು ಸೂರ್ಯಬೇಗೆ   

Wednesday, December 7, 2011








ಛಾಯಾ ಚಿತ್ರ:  ಪ್ರಕಾಶ್ ಹೆಗ್ಡೆ

ಜೀವನದಿ

ಹುಟ್ಟುಹಾಕಲು ಬೇಕು
ಗುಟ್ಟು ಅರಿಯಲು ಬೇಕು
ಇಲ್ಲವಿದು ಸುಲಭ ಹಾದಿ
ಮೆಟ್ಟಿ ಉಬ್ಬರಿಸೋ ಅಲೆ
ಜೀವ ಬಿಗಿಗೊಳಿಸೋ ಸೆಲೆ
ಏರಲೆಂದು ಬಯಸಿ ಗಾದಿ

ಬಿಟ್ಟು ತೀರದ ಬದುಕು
ಕಟ್ಟು ಬಾಳಿನ ಸರಕು
ನೀರ ಸೋಸುವುದೂ ಕಲೆ
ಜಲನಯನದ ಸೊಬಗು
ರುದ್ರ ಶರಧಿಯೂ ಮೆರಗು
ಹಾಯಿ-ಹಡಗು ಮೀನಬಲೆ

ಸುಳಿಗಳಿಲ್ಲದೇ ಎಲ್ಲಿದೆ ಜಲಧಿ
ಅಗಣಿತ ಗುಣ ಜಲಪರಿಧಿ
ಗಣಿ-ತೈಲ ಮುತ್ತು ಹುಟ್ಟುವುದಿಲ್ಲಿ
ನೆಲದಿ ಹರಿದಾಡಿರೆ ಸಿಹಿ
ಸಿಹಿಕೂಡಿ ಉಪ್ಪಿನಾಮೋಹಿ
ಸಾವಿನಲ್ಲೂ ದಿಟ ಬದುಕಿಹುದಿಲ್ಲಿ