Tuesday, December 29, 2009

ಗಾನ ಗಾರುಡಿಗನಿಗೆ ನಮನ

ಲಾಭ-ನಷ್ಟ
ತರವಲ್ಲ ತಂಬೂರಿ ತಂತಿ ಹರಿಯಿತು
ಇಹವಲ್ಲ ಪರಕೆ ಪ್ರಾಣಪಕ್ಷಿ ಹಾರಿತು
ನಿಮ್ಮಾಗಮನ ಸ್ವರ್ಗದಿ ಲಾಭವಲ್ಲಿ
ಕಳೆದುಕೊಂಡ ನಮಗೆ ಆಯಿತು ನಷ್ಟವಿಲ್ಲಿ.

ಹಾರಿತ್ತು ಪ್ರಾಣ ಪಕ್ಷಿ
ಕೋಡಗ ಆಗಲಿಲ್ಲ ಕೋಳಿಗೆ ತುತ್ತು
ಆನೆ ಹೊಗಲಿಲ್ಲ ಆಡಿಗಿಲ್ಲ ಹೊತ್ತು
ಮೋಡ ಮಳೆಗರೆಯದೆ ಹೋದದ್ದು
ಜಟಕದ ಕುದುರೆ ಸುಮ್ಮನೆ ನಡೆದದ್ದು
ನೀಲಾಕಾಶಕೆ, ಸಾಬಿಗೆ ಆಗದಾಯ್ತು ಗೊತ್ತು
ಯಾರಿಗೂ ತಿಳಿಯಲೇ ಇಲ್ಲ
ಹುಟ್ಟುಹಬ್ಬದಂದೇ ಪ್ರಾಣಪಕ್ಷಿ ಹಾರಿತ್ತು.


ಇನ್ನಿಲ್ಲದ ಗಾಯನ ಗಾರುಡಿಗ
ಮನಬಿಚ್ಚು-ಮುಕ್ತ ಕಂಠದ ಭೋರ್ಗರೆವ ಹಾಡು
ನೇಗಿಲಯೋಗಿ ಮಣ್ಣವಾಸನೆ ಬಂತಲ್ಲಿಗೆ ಬೀಡು
ಏನೋ ತವಕ, ಎಂತಹ ಚಿಮ್ಮುವ ಹುರುಪು ನೋಡು
ಗಾಯನ ಗಾರುಡಿಗನ ಕಳೆದುಕೊಂಡಿತು ನಮ್ಮ ನಾಡು

Sunday, December 6, 2009

ದಾನವತೆ ಕೊನೆಯಾಗುವುದು



ದಾನವತೆ ಕೊನೆಯಾಗುವುದು
ಕಣ್ಣುಕಲೆತರೆ - ತುಟಿ ಅಲ್ಲ
ರೆಪ್ಪೆಮಾತನಾಡುವುವು
ಕಣ್ಮುಚ್ಚಿ ತನ್ಮಯನಾದರೆ
ಮನ-ಮನದಿ ಮಾತನಾಡುವುದು
ಮನ-ತೆರೆದರೆ ಮನಕೆ
ಹೃದಯಗಳು ಒಂದಾಗುವುವು
ಹೃದಯ ಬಿಚ್ಚಿ ನುಡಿದರೆ
ನಡೆ-ತಡೆಗೋಡೆಯ ಹಾರುವುವು
ವೈಶಾಲ್ಯದಿ ಯೋಚನೆ ಹರಿದರೆ
ಹರಿವನದಿ ಸಾಗರ ಸೇರುವುದು
ಸಾಗರಕುಂಟೇ ಸೀಮೆಗಳು?
ಸಾಗರಕೆಲ್ಲಿಯ ಆಳಗಳು?
ಸಾಗರೆಕೆ ಸಾಗರೆವೇ ತಾ ಸಾಟಿ
ಕ್ಷುಲ್ಲಕಗಳು ಮರೆಯಾಗುವುವು
ಧರ್ಮಗಳು ಮನದ ನೆಮ್ಮದಿಗೆ
ಕರ್ಮಗಳು ಇಹದ ತಹಬದಿಗೆ
ಧರ್ಮ ತಹಬದಿಗೆ ಯತ್ನಿಸಿದರೆ
ಕರ್ಮಗಳು ನೆಮ್ಮದಿಯ ಕಾಡುವುವು
ಮಾನವತೆಗೆ ಮನಕೊಟ್ಟರೆ
ದಾನವತೆ ಕೊನೆಯಾಗುವುದು

ಮೂರ್ಖತೆ ಪರಮಾವಧಿ
ನನ್ನ ಮನೆಯ ವಸ್ತು
ನಾನೇ ಸುಟ್ಟು ಬೇಸ್ತು
ನೀನಿರಬಹುದು ಕಟ್ಟುಮಸ್ತು
ನಿನ್ನ ಬಾಲನೀನೆ ಹಿಡಿಯಬೇಡ
ಮೂರ್ಖ ಸಿಗದೇನೂ.. ಆಗುವೆ ಸುಸ್ತು
ಮುಷ್ಕರ, ಧರಣಿ ಕುಂತೆ
ನಿನ್ನ ಇಂದಿಗೆ ನಿನ್ನ ಚಿಂತೆ
ನಿನ್ನ ನೆರೆಯವನದು ಅನಿಸಿ ಕಂತೆ
ಮುಳುಗುವೆ ಇದು ಸ್ವಾರ್ಥಗಳ ಸಂತೆ
ಕೆಲಸ ಬಿಡುವೆ ..ಧ್ವಂಸ ಮಾಡುವೆ
ಕಂಸನಾಗುವೆ, ಹಿಂಸೆ ಮಾಡುವೆ
ಬಸ್ಸು, ಕಟ್ಟಡ ಸರ್ವಜನ ಆಸ್ತಿ ಸುಡುವೆ
ಯಾವುದೋ ಮಗು ನರಳಿಸುವೆ
ನಿನ್ನ ನಾಶಕೆ ನೀನೇ ನಾಂದಿ ಹಾಡಿಸುವೆ
ಬಿಡು ದ್ವೇಷ-ಕಟ್ಟು ದೇಶ
ಮರೆತು ರೋಷ- ಕಳಚು ವೇಷ
ಚೆಲ್ಲು ವಿಷ - ಇರಲಿ ಹರುಷ
ಇನ್ನೂ ಏಕೆ ಮೀನ ಮೇಷ?
ಎಲ್ಲಬಿಡು ಮರೆತು ಬಿಡು
ಜೊತೆಗೂಡು, ಹೆಗಲುಕೊಡು
ಕೃಷಿಮಾಡು ಕಟ್ಟು ನಾಡು
ಕೆಡಹಲು ಸಾಕು ಒಂದೇ ಕೋಡು
ನೆಡಲು ಬೇಕು ಸಾವಿರ ಮೇಡು
ಮೆಟ್ಟು ನಾಡು ಇದುವೇ ಬೀಡು
ಕಟ್ಟು ನಾಡು ಕಟ್ಟು ನಾಡು ಕಟ್ಟು ನಾಡು

Sunday, November 22, 2009

ಎರಡು ದಿಕ್ಕು -ಒಂದೇ ಯೋಚನೆ













ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ, ಮಾನವತೆಯನೇ ಮರೆತರು

Friday, October 30, 2009

ಎಲ್ಲಿದೆ ಪ್ರಳಯ...ಹೇಗೆ ಅಂತ್ಯ??? ಮಾಯನ್...ಮನು..?













ಹಿಂದೂ ಪುರಾಣಗಳ ಆಧಾರದ ಮೇಲೆ.....2012 ಕ್ಕೆ ಅರ್ಥ ಇಲ್ಲ??!!! ಹೇಗೆ?
(ಇದಕ್ಕೆ.. ಬಲ್ಲವರು ಪೂರಕ ಮಾಹಿತಿ ಕೊಡಬಹುದು)


"ಅರೆ ಇವನ ಇವನ ಪ್ರಳಯದ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬರಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.

ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...

ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??

ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...

ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!

Sunday, September 27, 2009

ಒಂದೆರಡು ಪಂಚು

ಬೀರಬಲ್
ಗುಂಡಾನೋ...
ಬೀರಬಲ್ಲ
ಬೀರನ್ನ ಬಿಟ್ರೆ
ಇನ್ನೇನನ್ನೂ ಬಲ್ಲ

ಕಣ್ಣ ಬಾಣ
ಕಣ್ಣಲ್ಲೇ ಬಾಣ
ಹುಬ್ಬು ಕುಣಿಸಿ
ಅದೇ ಬಿಲ್ಲು
ಅದಕ್ಕೇ ಹೇಳೋದು
ಹುಡ್ಗೀರ್ದೇ ದಿಲ್ಲು


ಬರ್ತ್ ಡೇ ಕೇಕು
ವೈಯ್ಯಾರಿ ಸೈಕಲ್ ಚಕ್ರ
ಸಗಣಿತೊಪ್ಪೆ ಕತ್ತರಿಸಿತ್ತು
ಬಿದ್ದಿದ್ದೊಂದು ಅಲ್ಲೇ ಹತ್ರ
ಹಿಂದೆ ನಿಂತ ಪಡ್ಡೇ ಹೈಕ್ಳು ಅಂದ್ರು
“ಹ್ಯಾಪಿ ಬರ್ತ್ ಡೇ ಟು ಯೂ”
ಕಿಲಾಡಿ ಹುಡ್ಗಿ
ಹಿಂತಿರುಗಿ ಹೇಳೋದೇ?
“ಪೂರ್ತಿ ಕೇಕ್ ಈಸ್ ಫ಼ಾರ್ ಯೂ”

ಐಸ್ ಕ್ರೀಮ್
ಅವಳಿಗೆ ಬಂತು
ಗುಂಡನ ಮೇಲೆ
ಅಚಾನಕ್ಕು ಪ್ರೇಮ
ಕರಗಿಬಿಟ್ಟ ಗುಂಡ
ತಿನ್ನೋಕೆ ಮುಂಚೆನೇ
ಅವಳು ಕೊಡ್ಸಿದ
ಐಸ್ ಕ್ರೀಮ

ವ್ಯತ್ಯಾಸ
ಮದ್ವೆಗೆ ಮುಂಚೆ
ಅವನದ್ದು ಪರ್ಸು
ಇಬ್ಬರದೂ –ಕೈ
ನಂತರವೂ..
ಅವನದ್ದೇ ..ಪರ್ಸು..
ಅವಳದ್ದೇ..ಕೈ

ಕಾರು ಬಾರು
ಗುಂಡ ಹೇಳ್ದ
ಇದೆ ನಂದೂ ದೊಡ್ಡ
ಕಾರುಬಾರು
ಮದುವೆಯಾಯ್ತು ಮಾವ ಕೇಳ್ದ
ತೋರಿಸ್ದ ತನ್ನ ಮುರುಕಲು ಕಾರು,
ಅದರಲ್ಲೇ ತುಂಬಿದ್ದ
ಬಾಟ್ಲು ಬ್ರಾಂದಿ-ಬೀರು
ಮಾಡಿ ಅದನ್ನೇ ಒಂದು ಬಾರು

ಕಣ್ಣೀರು
ಮಡುಗಟ್ಟಿದ ದುಃಖ
ಬೆಂಬಿಡದ ಶೋಕ
ಅವಡುಗಚ್ಚಿ ತಡೆದರೂ
ರೆಪ್ಪೆದೂಡಿ ಬರುವುದು
ಹನಿಯೊಂದು-ಕಣ್ಣೀರು

ಅವಿನಾಶ ಯಾರು ನಿನ್ನ
ವಿನಾಶಕ್ಕೆ ದೂಡಿದ್ದು?
ಕೇಳಿ- ಮನತುಂಬಿತ್ತು
ನನ್ನದೇ ಕರುಳಕುಡಿ
ವಿಜಯನಿಗೂ ಅದೇ ಗತಿ
ಯೋಚನೆ ಮಾತ್ರದಿ
ತಡೆಯಲಾರೆ ಬರುತಿರೆ
ಕಣ್ತುಂಬಿ - ಕಣ್ಣೀರು.

ಅವಿನಾಶ-ವಿಜಯರು
ಅವರೆಲ್ಲಿ ತಿರುಗಿ ಬರುವರು
ಬಂದರು ಹಲವರು
ಆಯುಕ್ತರು ಮಂತ್ರಿವರ್ಯರು
ಬಂತು ಹೊತ್ತು
ಲಕ್ಷಹೊತ್ತ ಅಧಿಕಾರಿಗಳ ಕವರು
ಲಕ್ಷ-ಕೋಟಿಗಳೂ ತಡೆಯಲಾರವು
ನೆನಪಹೊತ್ತು ಪದೇ ಪದೇ
ನಿಲ್ಲದೇ ಬರುವ-ಕಣ್ಣೀರು

Wednesday, September 2, 2009

ಮರಳಲ್ಲಿ-ಮರಳುಮಾಡುವ ಕೈಚಳಕ

ಬ್ಲಾಗು ಬಳಗಕ್ಕೆ, ಇದೊಂದು ಪೋಸ್ಟ್..ವೀಡಿಯೋ..ನಮ್ಮ ಚಿತ್ರಗ್ರಾಹಕ ಮಿತ್ರರಾದ, ಶಿವು, ಮಲ್ಲಿಕಾರ್ಜುನ್, ರಾಘವೇಂದ್ರ, ರೂಪಶ್ರೀ, ಪ್ರಕಾಶ್, ಅಗ್ನಿ, ಪ್ರಭು, ಗುರು, ಮತ್ತು ಇತರರಿಗೆ ಮೆಚ್ಚುಗೆ ಮತ್ತು ಇತರ ನನ್ನ ಬ್ಲಾಗು-ಬಳಗಕ್ಕೆ ಇಷ್ಟವಾಗುವುದೆಂದು ನನ್ನ ನಂಬಿಕೆ. ಚಿತ್ರ ರಚನೆ-ಕೈಚಳಕ ಎರಡನ್ನು ಒರೆಗಿಡುವ ಪ್ರಯತ್ನ.

Friday, August 28, 2009

Sunday, August 23, 2009

ಅದಲು-ಬದಲು

(ನನ್ನ ಬ್ಲಾಗ್ ಮಿತ್ರರ ಪ್ರತಿಕ್ರಿಯೆಯಿಂದ ಮಂಥಿತ ಕಾಂಪನ್ಸೇಷನ್ ಚುಟುಕದ ಎರಡನೇ ಭಾಗ)
ಎಂದಿನಂತೆ ಕೊಟ್ಟೆ ನನ್ನವಳಿಗೆ ಮುತ್ತು
ಜೊತೆಗೆ ಅವಳಮೂಗಿಗೊಂದು ನತ್ತು
ಗೊತ್ತಾಗಿಬಿಡ್ತು ನನ್ನ ಕಸರತ್ತು
ತೋರಿಯೇ ಬಿಟ್ಟಳಿವಳು ತನ್ನ ಗತ್ತು
ಬೇಡ ನನಗೆ ನತ್ತು ಸಾಕು ಒಂದೇ ಮುತ್ತು
ಅದಕೇ ಈಗ ಇಲ್ಲಿ ಮುತ್ತು
ಅಲ್ಲಿ ಮುತ್ತು ಮತ್ತು ನತ್ತು

Friday, August 21, 2009

ಎರಡು -ಕವನ ಚುಟುಕಗಳು

ಲೆಕ್ಕಾಚಾರ ಚಿಂದಿ
ಸೊಳ್ಳೆ ತಂತು ಮಲೇರಿಯಾ
ಆಮೇಲೆ ಡೆಂಗ್ಯೂ
ಜೊತೆಗೆ ಚಿಕನ್ ಗುನ್ಯಾ
ಈಗ ಎಲ್ಲಿ ನೋಡಿದರೂ
ಹಂದಿ-ಫೋಬಿಯಾ
ಬಂತು ಡಿ.ಡಿ.ಟಿ
ಎನ್ಡೋಸಲ್ಫಾನ್
ಸೊಳ್ಳೆಪರದೆ
ಟಾರ್ಟಾಯ್ಸ್ ಕಾಯಿಲ್
ಗುಡ್ ನೈಟ್ ಮ್ಯಾಟಿನ ಸೇಲ್
ಲಿಕ್ವಿಡೇಟರ್ ಗೂ ಕಾಲ್
ಅಮೇಲೆ ಕೋಳಿ ಸರದಿ
ತಂತು ಹಕ್ಕಿಜ್ವರದ ವರದಿ
ಈಗ ಸುದ್ದಿಯಲ್ಲಿದೆ ಹಂದಿ
ಜ್ವರ ಹರಡಿ ಮಾನವ ಬಂಧಿ
ರೋಗಗಳಿಗೆ ಇತಿಯಿಲ್ಲ
ಮಾಡಿವೆ ಮಾನವನ ಲೆಕ್ಕಾಚಾರ ಚಿಂದಿ.

ಮಳೆ-ಇಳೆ
ಮಳೆ
ಇಳೆಯತ್ತ
ಇಳಿದರೆ
ಬೆಳೆ
ಕಳೆ.
ಮಳೆ
ಬಂದರೆ
ಕೆರೆ ಹೊಳೆ
ನದಿ ನಾಲೆ

ಮಳೆ
ಆದರೆ ನೀರು
ಕುಡಿಯಲು
ಬೆಳೆಬೆಳೆಯಲು
ಕಳೆತೊಳೆಯಲು

ಮಳೆ
ಇಲ್ಲದಿರೆ
ಬತ್ತುವುದು ಸೆಲೆ
ತೊರೆವುದು ನೆಲೆ
ಕೆರೆ ನಾಲೆ
ಹಸಿರು ಎಲೆ
ಜೀವ ಕಾಣದು ಬೆಲೆ
ನಾಗರಿಕತೆಗದು ಬರಿ ಸೋಲೆ


ಮುತ್ತು
ಹತ್ತು-ಇಪ್ಪತ್ತು
ಮುತ್ತು ಸಿಕ್ಕಿತ್ತು
ಅದಕಿಲ್ಲ ಹೊತ್ತು ಗೊತ್ತು
ಬೇಡವೆನಲು ಆಪತ್ತು
ಯಾಕಂದ್ರೆ ಅದು ನಮ್ಮಿಬ್ಬರ ಸೊತ್ತು

ಕಾಂಪನ್ಸೇಷನ್
ಪ್ರಿಯೆಗೆ ಕೊಡಬೇಕು
ಕದ್ದು-ಮುಚ್ಚಿ ಮುತ್ತು
ಅದು ಗೊತ್ತಾಗದಿರಲು
ನನ್ನವಳಿಗೆ ಮುತ್ತು
ಜೊತೆಗೆ ಮುತ್ತಿನ ನತ್ತು

Thursday, July 30, 2009

ಒಂದು ಪ್ರಯತ್ನ




ಸ್ನೇಹಿತ/ತೆಯ ರೇ,
ರೂಪश्री ತಮ್ಮ ಬ್ಲಾಗ್ ನಲ್ಲಿ shape ಕವನಗಳ ಬಗ್ಗೆ ಬರೆದಿದ್ದು ಇನ್ನೂ ನಿಮ್ಮ ಸ್ಮೃತಿಯಲ್ಲಿ ಹಚ್ಚಗಿರಬೇಕು ಅದರ ಬೆಚ್ಚನೆ ನೆನಪು ಮತ್ತೆ ಹಚ್ಚ-ಲು ನನ್ನ ಬಾಲಿಶ ಪ್ರಯತ್ನ ಇಲ್ಲಿದೆ. ನೋಡಿ ನಿಮ್ಮ ಅನಿಸಿಕೆಯನ್ನು ದಯಮಾಡಿ ಹಾಗೇ...ಸುಮ್ಮನೆ...ಬರೆದುಬಿಡಿ...

Tuesday, July 21, 2009

ಗಂಗೆ ನಿನಗೆ ಕೋಟಿ ನಮನ
















ಗಂಗೆ ನಿನಗೆ ಕೋಟಿ ನಮನ
ನಿನ್ನ ಗಾಯನ ಸುಧೆ
ನಾಡೇಕೆ ಹೆಮ್ಮೆ
ಪಡುವುದು ವಸುಧೆ
ರುಚಿ-ಅಭಿರುಚಿ ಮೆಲ್ಲು
ಸಂಗೀತ ನಿನ್ನದು ಸೂಜಿಗಲ್ಲು
ಗಂಗೂ ನೀ ಹಾಡೆ ತೆರೆದ ಬಾಯಿ
ಶಾಂತ ಗಂಗೆ ನಡೆದಂತೆ ಹಾಯಿ
ಭೀಮಸೇನ-ಗಂಗೂ ಗಾಯನ
ಮಲ್ಲಿಕಾರ್ಜುನ ಕನ್ನಡಿಗರ ಮನನ
ಗಂಗೆ ಇಲ್ಲದಿರೆ ಇಹದಲಿ ಏನು?
ಗಾನಗಂಗೆ ಚಿರಂತನ ಅಲ್ಲವೇನು?
ನಿನ್ನ ದಾರಿ ನಮಗೆ ಮಾರ್ಗದರ್ಶನ
ಇಹತ್ಯಜಿಸಿದ ಚೇತನ ನಿನಗೆ ಕೋಟಿ ನಮನ





Sunday, July 19, 2009

ಫೋಟೋ












ಫೋಟೋ ಫೋಟೋ ....ಫೋಟೋಗಳು,
ಸ್ನೇಹಿತರೇ,
ನನಗೆ ಈ ಪೋಸ್ಟ್ ಗೆ ಪ್ರೇರಣೆ, ಶಿವು, ಮಲ್ಲಿಕಾರ್ಜುನ್, ಗುರು, ರೂಪಶ್ರೀ, ಮುಂತಾದ ಫೋಟೋ-ಪ್ರೇಮಿ ಅತಿರಥರು ಎಂದರೆ ಅತಿಶಯೋಕ್ತಿ ಏನಲ್ಲ. ಆದ್ರೆ ನನ್ನದು ಬರೀ ಎರವಲು ಪೋಸ್ಟ್..ಅವರಂತೆ ನಾನು ಚಿತ್ರಗ್ರಾಹಿಯಲ್ಲ. ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು ಈ ಅದ್ಭುತ ಫೋಟೋಗಳನ್ನು...ಅದಕ್ಕೆ ಹಾಕಿದೆ ಬ್ಲಾಗ್ ಗೆ. ಇದರ ಮೂಲ ನಮ್ಮ ಕುವೈತ್ ಕನ್ನಡ ಕೂಟದ ಪ್ರೆಸಿಡೆಂಟರಾದ ನಕ್ರೆ ಸತೀಶ್ ಚಂದ್ರ ಶೆಟ್ಟರ ಮೈಲ್.

ಈ ಫೋಟೋಗಳು ಅಮೇರಿಕೆಯಲ್ಲಿ ನಡೆದ ಮರಳಿನಮೇಲೆ-ಕಲೆ ಸ್ಪರ್ಧೆಯಲ್ಲಿ ಕ್ಲಿಕ್ಕಿಸಿದವಿಗಳು

Monday, July 13, 2009

ಮೀನು


ಜಲಸಂಕುಲದಲಿ
ವಿಕಸನ ಸಂಕೋಲೆ
ಅದಮ್ಯ ಕೊಂಡಿಯಲಿ
ಮಿಂದು ಬಂದುದು ಮೀನು.

ಜಲಜನನ
ಜಲನಯನ
ಜಲಜೀವನ
ಜಲಜಾಕ್ಷಿ ಮೀನು.

ಸುತ್ತಿಬರುತಲಿ
ತತ್ತಿಯಿಡಿತಲಿ
ಬಿತ್ತಿ ವಂಶವ
ಜಲಮಹತು ಮೀನು.

ಬೆನ್ನು ಮೂಳೆಯ
ಬೆನ್ನು ಹಿಡಿದರೆ
ನರ ಬೇರುತೋರುವ
ಜಲೋಗಾಮಿ ಮೀನು.

ಕೊಳವಿರಲಿ
ಕೆರೆಬರಲಿ
ನದಿ ಸೇರಿ
ಸಾಗಿ ಸಾಗರ
ಎಲ್ಲ-ಸಲ್ಲ ಮೀನು.

ನಿನ್ನೆಯ ಹಾದು ಬಂದಬೀದಿ,
ನಾಳೆಗೆ ತೋರು ಬರುವರಿಗೆ ಹಾದಿ
ಕಲಕಿರಾಡಿಯಿರೆ ನೀರು
ಅದತೊರೆದು ಬೇರೆಡೆ ಸೇರು
ಸರಾಗ ಗಮನ ನಯವ ಕಲಿ
ವಿರಾಗ ಬಿಡು ಮೀನಂತೆ ನಲಿ
ದಾಹ, ಹರಿದುಸಿರು ಮರೆಯದಿರು ನೀರು
ರಾಡಿಮಾಡದಿರು ಕುಡಿವುದು ಬೇರು
ಜಲನಯನಕೆ ಜಲವೇ ಜೀವ,
ತರುವುದು ಮನುಕಲಕೆ ತಪ್ಪಿನಡೆದರೆ ಸಾವ.

Monday, June 29, 2009

ಮಗು


ಮಗು
ನಿನ್ನಗು
ನನಗೂ
ಅಮ್ಮಗೂ.
ಮಗು
ನೀನಗು
ದೂಡಿ
ನಮ್ಮ ಬಿಗು.
ಮಗು
ನೀನಕ್ಕರೆ
ನಮಗೆ
ಹಾಲು ಸಕ್ಕರೆ
ತಾಯಿಗೆ
ನೀನೇ ಆಸ್ತಿ
ಹೇಳುವಳಲ್ಲಾ
ನನ್ನ ಚಿನ್ನ
ನನ್ನ ಬಂಗಾರ?

ಭಾವ, ಜೀವ, ಕವನ ಕಥನ



ಭಾವ ಭಾವಕೆ ಬದುಕು
ಬದುಕ ಬದುಕಲಿ ಭಾವ
ಭಾವವಿಲ್ಲದ ನಾವು
ತಣ್ಣಗೆ ಬಿದ್ದಂತೆ ಕಾವು

ಮಂಥಿಸಿದರೆ ಕಥನ
ಮಂಥಿಸಿದರೆ ಕವನ
ಮಂಥಿಸಿದರೆ ಸ್ವಂತ
ರಂಜಿಸಲು ಜೀವನ


ಅಕ್ಕನ ಗಂಡ ಭಾವ
ಅವರಿಲ್ಲದಿರೆ ಅಭಾವ
ಆ ಭಾವಕ್ಕೆ ಈ ಭಾವ
ಒಬ್ಬರೊಳಗೊಬ್ಬರ ಜೀವ

ಇಹದ ಬದುಕು - ಭವ
ಬದುಕಿರಲು - ಅದೇ ಜೀವ
ತೊರೆದುಜೀವ- ನಿರ್ಜೀವ
ಭಾವ ಬೇಕು ಮರೆಯಲು ನೋವ

‘ಮನಸ‘ ಕದಡಿತು - ಮೂಡಿತು ಕವನ
ಕನಸ ಹೆಣೆಯಿತು - ಬೆಂಬಿಡದ ಮನನ
ಭಾವನ- ಮಂಥನ, ಕಥನ- ಕವನ
ಹೀಗಲ್ಲವೇ ಸಹಜ ನಿರಂತರ ಜೀವನ ?

Wednesday, June 3, 2009

ಹಲೋ...ಪ್ರೊ. ಪರಮೇಶ್



(ದಾವಣಗೆರೆಯ ಗಾಂಜಾ ಸಾಧುವಿನ ಕಥೆ ಕೇಳಿ ಪ್ರೇರಿತ)

ಭಂ..ಭಂ..ಭೋಲೇ ಶಂಕರ
ಭಸ್ಮ ಉಂಟು ಭಂಗಿ ಇಲ್ಲ
ಸಿಗರೇಟ್ ಹಿಡಿದಿದೆ ನನ್ ಕರ
ಹಿಡಿದಿದೆ ಸುಕ್ಕು
ಮುಖ ಬಾಯಿ ಬೊಕ್ಕು
ಆದ್ರೂ ಯಾರಿಲ್ಲ ನನ್ ಥರ
ಕೈಲಿ ದೇಹಿ ಕಮಂಡಲ
ಗಡ್ಡನೆರೆ ಮುಖಮಂಡಲ
ಕಾವಿತೊಟ್ಟು ಹೇಳುವೆ ಹರೋಹರ
ಎಲ್ಲಿರುವೆ ಗಂಗಾಧರ
ಲೈನು busy ಬಲು ಭಯಂಕರ
ಮಿಸ್ ಕಾಲ್ ಕೊಟ್ಟಿರುವೆ ಪ್ರೊ.ಪರಮೇಶ್ವರ
ಯಾಗಾದಿ ಪೂಜೆ ಬೇಕಿಲ್ಲ
ಹೋಮ ಹವನ ಸಾಕಲ್ಲ
ಮೊಬೈಲ್ ಯುಗ ಆಯ್ತಲ್ಲ
ನೀನೇ ಕಾಲ್ ಮಾಡೋ ಶಿವ ಶಂಕರ

Monday, June 1, 2009

ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ



ಮೂರ್ತಿ, ಬ್ಲಾಗ್ ಪೋಸ್ಟ್ ನನಗೆ ಯಾರೋ ಮೈಲ್ ಮಾಡಿದ್ರು...ಬಹುಶಃ ಈ ಕವಿ ಮೂಲಕ...ನೆನಪಾಗ್ತಿಲ್ಲ, ಚನ್ನಾಗಿದೆ ವಿಷಯ ತಮಾಷೆ ಮತ್ತು ನಮ್ಮ ನಾಗರಿಕ ನಗರವಾಸಿಗಳು ಹಳ್ಳಿಯವರನ್ನು ಕಂಡು ಮೂಗು ಮುರಿಯೋದು ಬಿಡಬೇಕು..ಯಾಕಂದ್ರೆ ಕೆಲ ವಿಷಯ ಅವ್ರಿಂದ ಕಲೀಬೇಕಾಗುತ್ತೆ...
ಉದಾ.. ಹಳ್ಳಿ ಸ್ಕೂಲಿಗೆ ಕುತೂಹಲಕ್ಕೆ ಬಂದ ನಗರದ ಹುಡುಗ ಹಳ್ಳಿ ಹುಡುಗ್ರನ್ನ ಬುದ್ದಿ ಇಲ್ಲದೋರು ಅಂತ ಆಡ್ಕೊಂಡಿದ್ದನ್ನ ನೋಡಿ ಮೇಷ್ಟ್ರುಅವನಿಗೆ ಮತ್ತು ತಿಮ್ಮನಿಗೆ ಹೊರಗಡೆ ಹೋಗಿ ನಾವು ತಿನ್ನೋ ಅನ್ನದ ಮೂಲಾನ ತನ್ನಿ ಅನ್ತಾರೆ...ನಗರದ ಹುಡುಗ ಹೊರಗಡೆ ಕುಯ್ಲಿಗೆ ಗದ್ದೆ ಇದ್ದದ್ದು ನೋಡಿ ಮೇಷ್ಟ್ರು ನನ್ನ ಬುದ್ಧಿ ಪರೀಕ್ಷೆಗೆ ಹೀಗೆ ಹೇಳಿದ್ದಾರೆ ಅಂತ ..ತನ್ನ ಭಾವನ ಮನೆಗೆ ಹೋಗಿ ಅಕ್ಕಿ ಕಾಳುಗಳನ್ನ ತರ್ತಾನೆ...ಮೇಷ್ಟ್ರು ಇಬ್ಬರನ್ನೂ ಕೇಳ್ದಾಗ ತಿಮ್ಮ ಭತ್ತದ ತೆನೆ ತೋರ್ಸಿದ್ರೆ..ನಗರದ ಹುಡುಗ ಹೆಮ್ಮೆಯಿಂದ ಅಕ್ಕಿ ಕಾಳು ತೋರಿಸ್ತಾನೆ.
ಮೇಷ್ಟ್ರು ಹೇಳ್ತಾರೆ.. ನಾನು ಹೇಳಿದ್ದು ನಾನು ತಿನ್ನೋ ಅನ್ನದ ಮೂಲ.. ಅದಕ್ಕೆ ನಗರದ ಹುಡುಗ ಹೇಳ್ತಾನೆ..ಅಕ್ಕಿ ಅಲ್ಲವೇ ಅನ್ನಮಾಡೋಕೆ ಬೇಕಾಗಿರೋದು...ಆದ್ರೆ ತಿಮ್ಮ ಹೇಳ್ತಾನೆ, ಸಾ ಅಕ್ಕಿಗೂ ಮೊದ್ಲು ಭತ್ತ ಅಲ್ವೇ ಸಾ... ಷಹಬ್ಬಾಶ್ ತಿಮ್ಮ ಅಂತಾರೆ ಮೇಷ್ಟ್ರು.

Sunday, May 31, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ತೆರಿಗೆ ಹೆಚ್ಚು ವಸೂಲಿ ಆಯ್ತು ಅಂತ
ಬಿ.ಬಿ.ಎಂ.ಪಿ. ನೌಕರರಿಗೆ ಔತಣ ಏರ್ಪಡಿಸಿದ್ದರಲ್ಲಾ..?
ಹೌದು ಮಗು, encourage ಮಾಡೋಕೆ..
ಮತ್ತೆ ನಿರಂತರ ಹೆಚ್ಚು ಕೃಷಿ ಉತ್ಪನ್ನಗಳನ್ನು ಕೊಡೋ
ರೈತನಿಗೆ ಯಾಕೆ ..ಊಟ ಬೇಡ
ಸರಿಯಾಗಿ ವಿದ್ಯುತ್ ಪೂರೈಸ್ತಾಯಿಲ್ಲ ಸರ್ಕಾರ..?
ಗೊತ್ತಿಲ್ಲ ಮಗು.

ಅಪ್ಪಾ
ಏನುಮಗು?
ಮೈಸೂರ್ ಸಿಲ್ಕುಸೀರೆ ದುಬಾರಿಯಂತೆ?
ಹೌದು ಮಗು
ಮತ್ತೆ ಸರ್ಕಾರ ಮೂರು ಸಾವಿರಕ್ಕೆ
ಬಡವರಿಗೇ ಏಟುಕೋ ಸೀರೆ ಮಾಡ್ತಾರಂತೆ
ಹೌದು ಮಗು
ಚುನಾವಣೆ ಸಮ್ಯದಲ್ಲಿ ದಾಳಿಮಾಡಿ
ಜಪ್ತುಮಾಡಿದ ಸೀರೆ ಇವು ಅಂತಾರಲ್ಲಾ..
ಗೊತ್ತಿಲ್ಲ ಮಗು.

ಅಪ್ಪಾ
ಏನುಮಗು?
ಶಿವಮೊಗ್ಗದಲ್ಲಿ ಕೃಷಿ ವಿ,ವಿ, ಸ್ಥಾಪಿಸ್ತಾರಂತೆ?
ಹೌದು ಮಗು
ಮತ್ತೆ ರೈತನಿಗೆ ಕೃಷಿಗೆ ಇನ್ನೂ ಹೆಚ್ಚು
ಜಮೀನು ಸಿಗುತ್ತಾ?
ಗೊತ್ತಿಲ್ಲ ಮಗು

Sunday, May 24, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ಬಿನ್ ಲ್ಯಾಡನ್ನು ನಂ ಮಾವ
ಬಿಲ್ ಕ್ಲಿಂಟನ್ನು ನಂ ಬಾವ ಅಂತ ಹಾಡಿದೆಯಲ್ವಾ?
ಹೌದು ಮಗು
ಮತ್ತೆ ಇವರಿಬ್ಬರೂ ಕ್ಲೋಸ್ ರಿಲಟಿವ್ಸ್ ಅಂತಾಯ್ತಲ್ಲ?
ಹಾಗೇ ಅಂದ್ಕೋ...
ಮತ್ತೆ ನಮ್ಮಪ್ಪ ಲಾಲೂ ಅಂತಾನೂ ಇದೆ..!!!
ಇವರು ಮೂವರೂ ಸಂಬಂಧಿಕರಾಗ್ಲಿಲ್ವಾ?
ನಂಗೊತ್ತಿಲ್ಲ ಮಗು.

ಅಪ್ಪಾ..
ಹೇಳು ಮಗು..
ಬೆಂಗ್ಳೂರ್ ರೋಡುಗಳು ಮಳೆಯಿಂದ
ಹಳ್ಳ ಕೊಳ್ಳಗಳಾಗಿವೆಯಂತೆ..
ಹೌದು ಮಗು..ವಾಹನ ಏನು ಜನ ನಡೆದಾಡೋದೂ
ಅಪಾಯಕಾರಿ ಅಗ್ಬಿಟ್ಟಿದೆ
ಮತ್ತೆ ,,ಮಳೆ ಬರೋವರ್ಗೂ ರಿಪೇರಿ ಮಾಡೊಲ್ಲ
ಅಲ್ವಾ ಅಪ್ಪ,,?
ಹೌದು ಮಗು...
ಮಳೆ, ಸರ್ಕಾರ ನುಂಗಣ್ಣಗಳಿಗೆ ಒಳ್ಳೆ ಚಾನ್ಸು
ಅಂತ ಪೇಪರ್ನಲ್ಲಿ ಬರ್ದಿದ್ದಾರಲ್ಲಾ, ಯಾಕಪ್ಪಾ..?
ನಂಗೊತ್ತಿಲ್ಲ ಮಗು.

ಅಪ್ಪಾ..
ಏನು ಮಗು..?
ಕನ್ನಡದ ಗಾಯಕ ಪ್ರತಿಭೆಗಳಿದ್ರೂ
ಹಿಂದೀ ಗಾಯಕರನ್ನು ಕನ್ನಡಕ್ಕೆ ಯಾಕೆ ತರ್ತಾರೆ..?
ಅವರ ಹಾಡು ಜನಪ್ರಿಯ ಆಗಿದೆ ಅಂತ
...ಮತ್ತೆ ಬೋಲ್ಡ್ ಆಗಿ ಅಭಿನಯಿಸೋ
ಪರಭಾಷಾ ತಾರೆಯರನ್ನೂ ತರ್ತಾರಲ್ಲಾ..?
ಹೌದು ಮಗು..
ಅಷ್ಟು ‘ಬೋಲ್ಡ್‘ ಆಗಿ ಕನ್ನಡದ ಹುಡ್ಗೀರು
ಮಾಡೋಲ್ಲ ಆಂತಾನೇ..?
ನಂಗೊತ್ತಿಲ್ಲ ಮಗು.

ಅಪ್ಪಾ..
ಸ್ಲಂ ಅಂದ್ರೆ ಏನಪ್ಪಾ...??
ಬೆಂಗ್ಳೂರು ಹಳೇ ಮದ್ರಾಸು ರೋಡಿನಪಕ್ಕ
ಗುಡ್ಲು ಕಟ್ಕೊಂಡು ಇದ್ದಾರಲ್ಲಾ
ಕೊಳೆಗೇರಿ ಅಂತಾರಲ್ಲಾ ಅದು...
ಕೊಳೇಗೇರಿ ನಾಯಿಗೆ ಆಸ್ಕರ್ ಪ್ರಶಸ್ತಿ
ಕೊಟ್ಟರಂತೆ...??
ಹೌದು ಮಗು..
ಮತ್ತೆ ನಮ್ಮ ಗಬ್ಬು ನಾರೋದನ್ನ
ನಾವೇ ಜಗತ್ತಿಗೆ ತೋರ್ಸಿದ್ದಕ್ಕಾ ..ಪ್ರಶಸ್ತಿ?
ನಂಗೊತ್ತಿಲ್ಲ ಮಗು.

Thursday, May 21, 2009

ಮಹಾಮರ





ಕೊಕ್ಕಿಗೆ ಬೀಜ ಮೆತ್ತಿತ್ತು
ಅರಿವಿಲ್ಲದೇ ಬಿತ್ತಿತ್ತು
ಮಹಾವೃಕ್ಷಕ್ಕೆ ಆ ಸಣ್ಣಗಿಡ
ಆಗಿತ್ತು ಅಂಕುರಕೆ ದಡ
ನೋಡನೋಡುತಲೇ ಎಲೆ
ಹೆಣೆದು ಬೇರು ಗಿಡದ ಸುತ್ತ ಬಲೆ
ಗಿಡವಾಗತೊಡಗಿತು ಗೌಣ
ಬೀಜ ಬೀಗುವ ಮರಮಾಡಿ ತಾಣ
ಗಿಡ ಮಾಯವಾದದ್ದು,
ಮರ-ಅಮರವಾಗತೊಡಗಿದ್ದು,
ಆಸರೆಕೋರಿ ಬಂದದ್ದು,
ಮಹದಾಸರೆಯಾದದ್ದು,
ಬೇರು ಬೆರೆತದ್ದು,
ಕೊಂಬೆ ಬೇರುಬಿಟ್ಟದ್ದು,
ಚಾಚುಬಾಹು ಮರವಾದದ್ದು,
ಇದೆಲ್ಲ..ನಾವು ನೋಡಿಲ್ಲ
ನಮ್ಮ ಹಿರಿಯರಿಗೆ ನೆನಪಿಲ್ಲ
ಅಷ್ಟೇಕೆ ಅನ್ನುವರಲ್ಲ ಆಲಕ್ಕೆ ಹೂವಿಲ್ಲ.
ಇದು ಮಹಾ ವೃಕ್ಷ ಈಗ
ಪಾರ್ಕಿನಲಿ ವಿಹರಿಸಲು ಜಾಗ
ಹತ್ತಾರು ಮರಗಳು ಸೇರಿಕೊಂಡಂತೆ
ಸೂರಲಿ ಮೋಡ ಹರಡಿಕೊಂಡಂತೆ
ಆದರೆ...
ಒಂದು ದಿನ..!!??
ಬರಸಿಡಿಲು ಬಡಿದಂತೆ
ಧರೆಬಿರಿಯಿತೋ ಎಂಬಂತೆ
ಮಹಾವೃಕ್ಷ ಉರುಳಿತ್ತು ಧರೆಗೆ
ಒಮ್ಮೆಲೇ ತಲೆಯಮೇಲಿನ ಸೂರು
ಕಾಣದಾದಂತೆ
ಪಾರ್ಕು ಬಿಕೋ ಎನ್ನುತ್ತಿದೆ
ಆಲ ಇಲ್ಲದ್ದು ಏಕೋ ಕಾಡುತ್ತಿದೆ
ವಿಹಾರಾರ್ಥಿಗಳಿಗೆ ಆಸಕ್ತಿ ಇಲ್ಲದಾಗಿದೆ
ಮರದಿಂದಮರವಾಗುವ ಆಲ
ಸುತ್ತ ಹೆಣೆದ ಮಾನವ ಕೃತ್ರಿಮ ಜಾಲ
ಬೇರುಹರಡಲು ಇದಕೆ ಸಿಗದೆ ನೆಲ
ನೂರಾರು ವರ್ಷದ ಮಹಾ ಆಲ
ಧರೆಗುರುಳಿ ಕಂಡಿದೆ ಅಂತಿಮ ಕಾಲ
(Thanks Guru's World for the fotos and thought provocation)

Monday, April 13, 2009

ಸಾಗರಗಳು----ಮುಂದುವರೆದು,...
ನಾವು ಸಮುದ್ರ ತೀರದ beach ವಾತಾವರಣವನ್ನು ಗೆಳೆಯರೊಂದಿಗೆ, ಪರಿವಾರದೊಂದಿಗೆ ಹೋಗಿ ಅಸ್ವಾದಿಸುತ್ತಾ ವಿಹರಿಸುತ್ತೇವೆ. ಮಂಗಳೂರಿನ ಉಳ್ಳಾಲ,ಸೋಮೇಶ್ವರ ಅಥವಾ ಪಣಂಬೂರಿನ ಸಮುದ್ರ ತೀರಗಳನ್ನು ನೋಡಲು ಭಾನುವಾರ ನಾವು ಹಾಸ್ಟೆಲ್ ನಿಂದ ಮಧ್ಯಾನ್ಹದ ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆದು ಹೊರಟುಬಿಡುತ್ತಿದ್ದೆವು. ದಿನವಿಡೀ ಬಿಸಿಲಿನಲ್ಲಿ ದಣಿದು ಸ್ವತಃ ಸೂರ್ಯನೇ ಸಮುದ್ರದಲ್ಲಿ ಮುಳುಗಲು ಹೋಗುತ್ತಿದಾನೋ ಎನ್ನಿಸುವಂತೆ ಪಶ್ಚಿಮದ ದಿಗಂತ ಕೆಂಪಾಗಿ ನಂತರ ಕೇಸರಿಯಾಗಿ ನಂತರ ಕ್ರಮೇಣ ಸೂರ್ಯ ಸಮುದ್ರದೊಳಕ್ಕೆ ಹೋಗಿ ಬಚ್ಚಿಟ್ಟುಕೊಂಡನೋ ಎನ್ನುವಂತೆ ಭಾಸವಗುತ್ತಿತ್ತು. ತೀರವನ್ನು ಸಮೀಪಿಸುತ್ತಿದ್ದಂತೆ ಸಮುದ್ರದ ಅಲೆಗಳು ಎತ್ತರಕ್ಕೆ ಬೆಳೆಯುತ್ತಾ ಎಲ್ಲಿ ಮರಳಿನ ಮೇಲೆ ಕುಳಿತ ನಮ್ಮ ಮೇಲೆ ಅಪ್ಪಳಿಸುತ್ತವೆಯೋ ಎನ್ನುವಂತೆ ಹತ್ತಿರವಾಗುತ್ತಾ..ಎತ್ತರ ಹೆಚ್ಚಾಗಿ ಶಿಖರ ಮುರಿದಂತೆ ಮೇಲ್ಪದರ ಮುರಿದು ತನ್ನದೇ ಪಾದಕ್ಕೆ ಬೀಳುತ್ತಾ ಉರುಳಿಬಿಡುತ್ತಾ ನಮ್ಮ ಹೆದರಿಸಿದಂತೆ ಮಾಡಿ ಕರಗಿಬಿಡುತ್ತಿದ್ದವು.

ಸಮುದ್ರದ ಅಲೆಗಳು ಹೇಗೆ ಉತ್ಭವಿಸುತ್ತವೆ?
ಸಮುದ್ರ ತೀರದಲ್ಲಿ ಕುಳಿತು ಮೇಲೆ ಹೇಳಿದಂತೆ ಅನುಭವಿಸಿದ ಬಹುಶಃ ಎಲ್ಲರ
ಮನಸ್ಸಲೂ ಮೂಡುವ ಪ್ರಶ್ನೆಯಿದು. ಗಾಳಿಯಿಂದ ಅಲೆಗಳು ಹುಟ್ಟುತ್ತವೆ ಎಂದು ಹೇಳುವವರೂ ಸ್ವಲ್ಪಮಟ್ಟಿಗೆ ಸರಿಯೇ, ಆದರೆ ಇದು ಸಣ್ಣಪುಟ್ಟ ಕುಂಟೆ, ಕೆರೆ ಬಾವಿ ಗೆ ಬಹುಶಃ ಹೆಚ್ಚು ಸೂಕ್ತ. ಸಮುದ್ರದಷ್ಟು ಅಗಾಧ ಜಲರಾಶಿಯನ್ನು ಬರಿಯ ಗಾಳಿ ಅಲುಗಾಡಿಸುವುದೆಂದರೆ ಅಷ್ಟು ನಿಜವಲ್ಲ. ಭೂಮಿಯ ಚಲನೆ, ಚಂದ್ರನ ಗುರುತ್ವಾಕರ್ಷಣೆ ಹಾಗೂ ಸಮುದ್ರ ತಲದ ರೂಪರೇಶೆಗಳು ಗಾಳಿಯ ಪ್ರಭಾವವನ್ನು ಹೆಚ್ಚಿಸುತ್ತವೆ. ಗಾಳಿಯ ಒತ್ತಡ ಅಥವಾ ವಾಯುಭಾರದ ಕುಸಿತ ಸಮುದ್ರದ ಅಲೆಗಳ ಮೇಲೆ ಹೆಚ್ಚು ಪರಿಣಾಮವನ್ನುಂಟುಮಾಡುತ್ತದೆ. ಚಂಡಮಾರುತದ ಮುಖ್ಯ ಕಾರಣ ಇದೇ ಆಗಿದೆ. ಇನ್ನು ಸುನಾಮಿ ಎನ್ನುವುದು ವಾಯುಭಾರ ಕುಸಿತದೊಂದಿಗೆ ಭೂಕಂಪನದ ವಿಕೋಪಸೇರಿ ನೈಸರ್ಗಿಕ ಮಹಾವಿಕೋಪವಾಗುತ್ತದೆಂದು ನಮಗೆಲ್ಲಾ ಈ ಗಾಗಲೇ ತಿಳಿದಿದೆ.



ಸಾಮಾನ್ಯ ಪರಿಸ್ಥಿತಿಗಳಲ್ಲಿ ಸಮುದ್ರ ಅಲೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸಲು ಇಛ್ಚಿಸುತ್ತೇನೆ.
ಸಮುದ್ರದ ತೀರದಿಂದ ದೂರಕ್ಕೆ ಹೋದಂತೆ ಆಳ ಹೆಚ್ಚುತ್ತದೆ ಎಂದು ನಿಮಗೆ ತಿಳಿದೇ ಇದೆ. ಇದು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ತೀರದಿಂದ ಸುಮಾರು ದೂರದವರೆಗೂ ಆಳ ಕಡಿಮೆಯಿರುತ್ತದೆ (ಭೂಮಂಡಲದ ರಚನೆಯ ಆಧಾರದ ಮೇಲೆ ಇದರಲ್ಲಿ ವ್ಯತ್ಯಾಸಗಳಿರಬಹುದು). ಈ ಇಳಿಜಾರಿನ ಪ್ರದೇಶವನ್ನು continetal shelf (ಭೂಖಂಡ ಇಳಿಜಾರು) ಎನ್ನಲಾಗುತ್ತದೆ (ಚಿತ್ರ ನೋಡಿ). ಆನಂತರ ಇಳಿಜಾರು ಸ್ವಲ್ಪ ಕಡಿದಾಗಿತ್ತದೆ, ಈ ಭಾಗವನ್ನು contonental slope (ಭೂಖಂಡ ಕಡಿದು ಇಳಿಜಾರು) ಮತ್ತು ಆಳ ಭಾಗವನ್ನು deep sea (ಆಳ ಸಮುದ್ರ) ಎನ್ನಲಾಗುತ್ತದೆ. ಆಳವುಳ್ಳ ಸಮುದ್ರದ ಮೇಲ್ಭಾಗದಲ್ಲಿ ನೀರಿನ ಸಾಂದ್ರತೆ (ತೂಕ), ಭೂಮಿಯ ಚಲನ ಮತ್ತು ಗುರುತ್ವಗಳಿಂದ ಇಡೀ ಜಲಪದರ ಮೇಲೆ-ಕೆಳಗೆ ಆಡುತ್ತಿರುತ್ತದೆ. ಇದನ್ನು ಉಬ್ಬರಗಳು ಅಥವಾ ಸ್ವೆಲ್ಸ್ (swells) ಎನ್ನುತ್ತಾರೆ. ಈ ಉಬ್ಬರಗಳು ಮೇಲೆ ಕೆಳಗೆ ಆಡುವುದರಿಂದ ಆಳ ಸಮುದ್ರದ
ಪ್ರದೇಶದಲ್ಲಿ ಅಷ್ಟಾಗಿ ಮನವರಿಕೆಯಾಗದಷ್ಟು ಅಲೆಗಳು ಇರುತ್ತವೆ ಎನ್ನಬಹುದು. ಈ ಉಬ್ಬರಗಳು ಭೂಖಂಡದ ಇಳಿಜಾರನ್ನು ತಲುಪಿದಾಗ ಭೂಭಾಗ ನೀರಿನ ಪದರವನ್ನು ಪುಟಿಸುತ್ತದೆ. ಆಗ ಉಬ್ಬರದ ಅಬ್ಬರ ಸ್ವಲ್ಪ ಹೆಚ್ಚಾಗುತ್ತದೆ. ಭೂಭಾಗದ ಇಳಿಜಾರು ತೀರಕ್ಕೆ ಹತ್ತಿರವಾಗುತ್ತಾ ಉಬ್ಬರದ ಅಬ್ಬರ ಹೆಚ್ಚಾಗುತ್ತಾ ಅಲೆಯ ರೂಪ ಪಡೆಯುತ್ತದೆ. ಹೀಗೆ ಏರುವ ಅಲೆ ತೀರವನ್ನು ಸಮೀಪಿಸಿದಂತೆ ಎತ್ತರ ಹೆಚ್ಚಾಗಿ ತೀರದ ಭೂಮಿಯ ತಡೆಯೂ ಹೆಚ್ಚಾಗಿ ಒಂದು ಹಂತದ ಎತ್ತರಕ್ಕೆ ಹೋದ ಅಲೆಯ ಮೇಲ್ಭಾಗ ಮುರಿದು ಬೀಳುತ್ತದೆ ಆಗ ಅಲೆ ನಿಧಾನವಾಗಿ ತೀರದಲ್ಲಿ ವರ್ತುಲ ಪೂರೈಸಿ ಮತ್ತೆ ಸಮುದ್ರದತ್ತ ನಡೆಯುತ್ತದೆ. ಚಂಡಮಾರುತ ಅಥವಾ ಸುನಾಮಿ ಮುಂತಾದ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಮೇಲೇರುವ ನೀರಿನ ಪ್ರಮಾಣ ಅಧಿಕವಾಗುವುದರಿಂದ ಅದು ತನ್ನ ಸಹಜ ತೀರ ಪ್ರದೇಶವನ್ನು ಮೀರಿ ಮುನ್ನಡೆಯುತ್ತದೆ.

Saturday, April 11, 2009

ಗೆಳೆಯರೇ ಸಮುದ್ರಗಳ ಬಗ್ಗೆ ಮಾಹಿತಿ ಕೊಡಬೇಕೆಂಬ ಯೋಚನೆಯಿಂದ ಈ ಶೃಂಖಲೆಯನ್ನು ಪ್ರಾರಂಭಿಸುತ್ತಿದ್ದೇನೆ. ಮೊದಲ ಕಂತಿನಲ್ಲಿ ಸಮುದ್ರಗಳ ಬಗ್ಗೆ ಕ್ಲುಪ್ತ ಮಾಹಿತಿ ಮತ್ತು ಕ್ರಮೇಣ ವಿವರಗಳನ್ನು ನೀಡಬೇಕೆಂಬುದೇ ನನ್ನ ಆಶಯ.








ನಮ್ಮ ಸಾಗರ-ಸಮುದ್ರ ಸಂಪತ್ತು -1

ಭೂಮಂಡಲದ ಶೇ ೭೦ ಭಾಗ ಸಮುದ್ರಗಳಿಂದ ಕೂಡಿದೆ. ಈ ಅಗಾಧ ಜಲರಾಶಿಯೇ ಸಕಲ ಜೀವೋದ್ಭವಕ್ಕೆ ದಾರಿಯಾಯಿತೆಂದರೆ ಜಲ ಮತ್ತು ಜೀವಗಳ ಮಧ್ಯೆ ಇರುವ ಅಪೂರ್ವ ಸಂಬಂಧ ಎಷ್ಟೊಂದು ಗಾಢವಾದುದು ಎಂದು ತಿಳಿಯುತ್ತದೆ. ಎಲ್ಲ ಸಮುದ್ರಗಳೂ ಉಪ್ಪುನೀರಿನಿಂದ ಕೂಡಿದ್ದು, ಭೂಭಾಗದ ಲವಣಾಂಶಗಳ ಕರಗುವಿಕೆಯಿಂದ ನದಿಗಳಿಂದ ಹರಿದುಬಂದು ಸಮುದ್ರ ಸೇರಿದ ನದಿನೀರು ಉಪ್ಪಾಗಲು ಕಾರಣವಾಗುತ್ತದೆ. ಸಮುದ್ರದ ನೀರಿನಲ್ಲಿ ಸರಾಸರಿ ೩.೫ ರಿಂದ ೪.೦ ಶೇ. ಉಪ್ಪಿನಂಶ ಇರುತ್ತದೆ. ಕೆಲ ಸಮುದ್ರಗಳಲ್ಲಿ (ನದಿಗಳ ಅಗಾಧತೆ, ಮಂಜುಕರಗುವಿಕೆ ಮತ್ತು ಅಧಿಕ ಮಳೆ ಈ ಎಲ್ಲಾ ಕಾರಣಗಳಿಂದ) ಉಪ್ಪಿನಂಶ ಕಡಿಮೆಯಿರುತ್ತದೆ. ‘ಮೃತ‘ ಅಥವಾ ‘ಸತ್ತ ಸಮುದ್ರ‘ (Dead Sea) ಎಂದೇ ಹೆಸರಾಗಿರುವ ಸಮುದ್ರದ ಉಪ್ಪಿನಂಶ ಅತ್ಯಧಿಕವಾಗಿದ್ದು ಇಲ್ಲಿ ಜೀವರಾಶಿ ಬಹಳ ವಿರಳ. ಈ ಸಮುದ್ರದ ನೀರಿನಲ್ಲಿರುವ ಉಪ್ಪಿನಂಶ ಎಷ್ಟಿರಬಹುದೆಂದು ಯೋಚಿಸಿ..!! ಪ್ರತಿ ಲೀಟರ್ ನೀರಿನಿಂದ ೩೩೦ ಗ್ರಾಂ ಉಪ್ಪನ್ನು ಪಡೆಯಬಹುದೆಂದರೆ...ಅಲ್ಲಿ ಯಾವ ಜೀವ ಉಳಿಯಲು ಸಾಧ್ಯ ಯೋಚಿಸಿ..??.!!! ಈ ಸಮುದ್ರ ಸಮುದ್ರ ಮಟ್ಟದಿಂದ ಸುಮಾರು ೪೨೦ ಮೀಟರ್ ಕೆಳಗಡೆ ಇದ್ದು, ವಾರ್ಷಿಕ ಮಳೆಪ್ರಮಾಣ ೫೦ (ದಕ್ಷಿಣ ಭಾಗ) ರಿಂದ ೧೦೦ ಮಿ.ಮೀ. ಆಗಿರುತ್ತದೆಂದು ದಾಖಲೆ ಹೇಳುತ್ತದೆ








ಸಾಗರಗಳನ್ನು ಮುಖ್ಯವಾಗಿ ಶಾಂತ (Pacific) ಸಾಗರ, ಅಟ್ಲಾಂಟಿಕ್ (Atlantic) ಸಾಗರ, ಹಿಂದೂ ಮಹಾ ಸಾಗರ, ಧೃವ ಸಾಗರ (ಉತ್ತರ ಮತ್ತು ದಕ್ಷಿಣ ಧೃವ) ಗಳೆಂದು ಹೆಸರಿಸಲಾಗಿದೆ. ಭೂಭಾಗದ ಮೂರನೇ ಒಂದು ಭಾಗ ಆವರಿಸಿರುವ ಶಾಂತ ಸಾಗರ ಅತ್ಯಂತ ವಿಶಾಲ ಸಾಗರ. ಭೂ ಮಂಡಲದ ಅತ್ಯಂತ ಆಳದ ಕಂದರ ಈ ಸಾಗರದಲ್ಲೇ ಕಂಡುಬರುತ್ತದೆ. ಇದನ್ನು Challenger's Deep (ಛಾಲೇಂಜರ್ ಕಂದರ) ಅಥವಾ Mariana Trench (ಮೆರಿಯಾನಾ ಕಂದರ) ಎನ್ನುತ್ತಾರೆ. ಈ ಕಂದರದ ಆಳ ಎಷ್ಟೆಂದರೆ...ಅತಿ ಎತ್ತರದ ಶಿಖರವಾದ ಎವೆರೆಸ್ಟನ್ನು ಸುಲಭವಾಗಿ ಸಮುದ್ರದಲ್ಲಿ ಮುಳುಗಿಸಬಹುದು...!!!! ಅಂದರೆ ಈ ಆಳ ಸುಮಾರು ೧೦ ೯೧೧ ಮೀಟರ್ ಅಥವಾ ೩೫,೭೯೭ ಅಡಿ ಎಂದು ಅಂದಾಜಿಸಲಾಗಿದೆ (ಇದರ ನಿಖರ ಆಳ ತಿಳಿಯಲಾಗಿಲ್ಲ..!!! ಇದು ಇನ್ನೂ ಆಳವಿರಬಹುದು..!!!)








ಇನ್ನು ಸಮುದ್ರದಲ್ಲಿ ಪರ್ವತಗಳಿವೆಯೇ..?? ಹೌದು..!! ಕೆಲವಂತೂ ಸಮುದ್ರ ತಳದಿಂದ ಮೇಲೆದ್ದು ಸಮುದ್ರಮಟ್ಟವನ್ನೂ ಮೀರಿ ಸಮುದ್ರದಮೇಲೆ ಕಂಡುಬಂದಿವೆ. ಭೂಭಾಗದ ಅತ್ಯಂತ ಎತ್ತರದ ಪ್ರದೇಶ ಹಿಮಾಲಯ ಪರ್ವತಗಳು ಎಂದೂ, ಎವರೆಸ್ಟ್ ಪರ್ವತ ವಿಶ್ವದ ಅತ್ಯುನ್ನತ ಪರ್ವತವೆಂದೂ ಬಹುಶಃ ಪ್ರಾಥಮಿಕ ಪಠ್ಯ ಪುಸ್ತಕಗಳ ಮೂಲಕ ತಿಳಿಸಲಾಗಿದೆ. ಇಲ್ಲಿ ಕುತೂಹಲಕರ ಅಂಶವೊಂದನ್ನು ತಿಳಿಸಲಿಚ್ಛಿಸುತ್ತೇನೆ.!! ಏನು ಗೊತ್ತೇ..?? ಅತ್ಯಂತ ಎತ್ತರದ ಪರ್ವತ ಎವರೆಸ್ಟ ಅಲ್ಲ ಎಂದು....!!!! ಹೌದು...ಸಮುದ್ರ ಮಟ್ಟದಿಂದ ಅಳೆದ ಅತ್ಯಂತ ಎತ್ತರದ ಪರ್ವತ ಎಂದರೆ ಅದು ಖಂಡಿತ ಮೌಂಟ್ ಎವರೆಸ್ಟ್ ಹೌದು...!! ಆದರೆ..!!!!! ಪರ್ವತದ ತಳದಿಂದ ಅದರ ತುದಿಯವರೆಗಿನ ಎತ್ತರವನ್ನು ಅಳೆದರೆ... ಎವರೆಸ್ಟ್ ಗಿಂತಲೂ ಸುಮಾರು ೩೦೦೦ ಅಡಿಗಳಷ್ಟು ಹೆಚ್ಚು ಎತ್ತರದ ಪರ್ವತವೊಂದಿದೆ...!!! ಆದೇ.. ಹವಾಯಿ ದ್ವೀಪಗಳ ಸಮೂಹದ ಸಮುದ್ರದಲ್ಲಿ ಕಂಡುಬರುವ ‘ಮೌನಾ ಕಿಯಾ‘ ಎಂಬ ಪರ್ವತ...!!!! ತಳದಿಂದ ಇದರ ಎತ್ತರವನ್ನು ೩೩,೪೬೫ ಅಡಿ ಎಂದು ದಾಖಲಿಸಲಾಗಿದೆ, ಅಂದರೆ ಇದರ ಎತ್ತರ ಎನರೆಸ್ಟ್ ಗಿಂತ ೪,೪೩೬ ಅಡಿ ಅಧಿಕ. ಆದರೆ ಈ ಪರ್ವತದ ೧೩,೭೯೬ ಅಡಿ ಭಾಗ ಮಾತ್ರ ಸಮುದ್ರದಿಂದ ಹೊರಚಾಚಿದೆ.



Thursday, April 9, 2009

ಜೊತೆ-ಜೊತೆ


ಜೊತೆ-ಜೊತೆ

ಮನಸು ಮುದುಡಿದೆ
ಮನವ ಕಲಕಿದೆ
ಮನಮೆಚ್ಚಿದವ
ಮನಚುಚ್ಚಿದರೆ

ಗೆಣೆಯರ ಮಧ್ಯೆ
ಗೇಣೂ ಇಲ್ಲದ್ದು,
ಒಮ್ಮೆಗೇ ಹೀಗಾಯಿತೇಕೆ?
ಗೋಣು ಮುರಿದಂತೆ
ಗೋಳಾಡಿಸಿದ್ದು

ಎಲ್ಲದಕು ಅವನು
ಸಲ್ಲುವನು ಬಿಡನು
ಮೆಲ್ಲಮೆಲ್ಲಗೆ ಏಕೆ
ನಿಲ್ಲುವನು ದೂರ?

ಕಣ್ಣಂಚಿನ ಮಿಂಚನು
ಬೆಂಚಂಚಿನ ಸಂಚನು
ಇಂಚಿಂಚು ಅರಿತವನು
ಸಂಚಿಗೇಕೆ ಬಲಿಯಾದನು?

ಅವನ ಬಾಲ್ಯ ಜೊತೆ-ಜೊತೆ
ಕೌಮಾರ್ಯ ಜೊತೆ-ಜೊತೆ
ಶಾಲೆಯುದ್ದಕ್ಕೂ ಜೊತೆ
ಕಾಲೇಜಿನ ಕೀಟಲೆಗೂ ಜೊತೆ
ಬಾಳ ಬವಣೆಯಲೂ ಜೊತೆ
ಅಪಾರ್ಥವ ಅರ್ಥೈಸಿ ಸರಿಮಾಡಿ
ಮತ್ತೆ ಆಗಿ ಬಿಟ್ಟೆವು ಜೊತೆ-ಜೊತೆ

Friday, April 3, 2009

(ಅ)ರಾಜಕಾರಣಿ

ರಾಜಕಾರಣಿ.. ರಾಜಕಾರಣಿ ಓಟು ಬೇಕೆ..?
ಓಟು ಕೊಂಡು ನಮ್ಮ-ನಮ್ಮೊಳಗೇ ತಂದಿಡಬೇಕೆ..?

ರಾಜಕಾರಣಿ ಓಟು ಕೊಂಡು ಏನು ಮಾಡುವೆ ?
ಕುರ್ಚಿಗಂಟಿ ರಕ್ತಹೀರಿ ಸ್ವಿಸ್ಸುಬ್ಯಾಂಕಿನಲ್ಲಿ ಕೋಟಿಮಾಡುವೆ

ರಾಜಕಾರಣಿ ಕುರ್ಚಿ ಸಿಗದೆ ಹೋದರೆ ಏನು ಮಾಡುವೆ..?
ಅನ್ನವಿಟ್ಟ ತಟ್ಟೆಯಲ್ಲಿ holeಉ ಮಾಡುವೆ

ರಾಜಕಾರಣಿ ನಿನ್ನನೆಚ್ಚಿ ಓಟುಕೊಟ್ಟರೆ
ಬಡವ ತನ್ನ ಒಳಿತಿಗಾಗಿ ಧಣಿಯ ನೆಚ್ಚಿಕುಂತರೆ
ರೈತ ತನ್ನ ಸಾಲ ಹೊರೆಯ ಹೊತ್ತು ಕುಂತರೆ
ಸ್ಕೂಲು ಮಕ್ಕಳೆಲ್ಲ ಓದಲು ಕತ್ತಲು ಕಳೆವುದೆಂದುಕೊಂಡರೆ
ಹೆಮ್ಮಕ್ಕಳು ತಮಗೂ ಮೀಸಲಾತಿ ಅರಸಿ ನೆಡೆದಿರೆ
ಹೇಳು ಎಲ್ಲರಾಸೆ ನೆರವೇರಲು ಏನು ಮಾಡುವೆ..?

ನನ್ನ ಮಗ, ಅಳಿಯ, ಹೆಂಡ್ತಿಗಾಗಿ ಒಂದೊಂದು ಛೇರು
ಸ್ವಿಸ್ಸ್ ನಲ್ಲಿ ಜಮಾವಣೆ, ಬಂಗ್ಲೆ ಬಂಡಿ ಜಮೀನು ಚೂರು
ನಮ್ಮವರೆಲ್ಲರ ಹೆಸರಲ್ಲೊಂದು ನೂರೋ ಇನ್ನೂರೋ ಶೇರು
ಆದಮೇಲೆ...ನನ್ನವರಿಗೆ ನೌಕರಿ, ನನ್ನ ಜಾತಿಯವರ ಚಾಕರಿ
ಅಧಿಕಾರಿಗಳಿಗೆ ಬಢೋತರಿ, ಪುಢಾರಿಗಳಿಗೆ ಛೋಕರಿ...
ಹೀಗೆಲ್ಲ ಪಟ್ಟಿರುವೆ ಈ ಐದು ವರ್ಷದಲ್ಲಿ ಎಷ್ಟೊಂದು ಬವಣೆ
ಓಟುಕೊಟ್ಟವನ ನೆನಪಾಗುವುದರಲ್ಲಿ ಬಂದೇ ಬಿಡ್ತು ಚುನಾವಣೆ

ಅದಕ್ಕೆ ಈಗ ಬಂದಿರುವೆ ನಿಮ್ಮೆಲ್ಲರ ಮುಂದೆ
ಬಾಕಿ ಇರುವ ಕೆಲಸವನ್ನು ಪೂರೈಸೋಣವೆಂದೇ
ಅಮ್ಮ, ಅಪ್ಪ, ಅಕ್ಕ ಆಣ್ಣಗಳಿರಾ ಕೊಡಿ ನಿಮ್ಮ ಅಮೂಲ್ಯ ಓಟು
ಈ ಬಾರಿ ಪೂರೈಸುವೆ ಆಶ್ವಾಸನೆ, ತರುವೆ ನಿಮ್ಮ ಮನೆಗೆ ಲೈಟು.

ಆಶ್ವಾಸನೆಗಳ ಶ್ವಾನವಿದು,
ನಾಯಿಹೆಸರಿಗೆ ಅಪಚಾರವಿದು,
ಅದು ಅನ್ನ ತಿಂದು ಮನೆಕಾಯ್ವದು
ಇದು ತಿಂದ ಮನೆಗೇ ಕನ್ನ ಕೊರೆವುದು.



Thursday, March 12, 2009

ಹೀಗೂ ಒಂದು ಪ್ರೇಮ-ಕಥೆ

ಹೀಗೂ ಒಂದು ಪ್ರೇಮ-ಕಥೆ
ಬಂದು ನಿಂದವಳು ಮನದಲ್ಲಿ
ಅಂದು ಕೊಂದವಳು ಕಣ್ಣಲ್ಲಿ
ಹುಬ್ಬ ಬಿಲ್ಲಿನೆದೆಗೆ
ನೋಟ, ಬಾಣವು ಗುರಿಗೆ
ಕಾಡಿ ಆಡಿಸಿ ನಾಟಿತ್ತು
ಮನದ ಬೇಗೆಯ ಕದಡಿತ್ತು
ಮಂದಸ್ಮಿತೆ..ಆಳ ಕುಳಿಗೆನ್ನೆ
ಕೆಂದುಟಿ ಮನೋಹರಿ ಮನದನ್ನೆ
ಕಣ್ಣು-ಕಣ್ಣು ಹಲವೊಮ್ಮೆ ಕೂಡಿದ್ದವು
ತುಟಿಬಿಚ್ಚದೇ ಮಾತನಾಡಿದ್ದವು
ನಾವಾಗಲಿಲ್ಲ ರೋಮಿಯೋ-ಜೂಲಿಯಟ್ಟು
ಆಗಲಿಲ್ಲ ಲೈಲಾ-ಮಜನೂ, ತಲೆಕೆಟ್ಟು
ಕಳೆದಿವೆ ವಸಂತಗಳು ಮುವತ್ತು
ನಡೆದಿದೆ ನಂನಮ್ಮ ಸಂಸಾರದ ಕಸರತ್ತು
ಈಗಲೂ ಯಾವಾಗಲಾದರೂ ಅಪರೂಪಕ್ಕೆ
ಅವಳ-ನಾನು, ನನ್ನ-ಅವಳು ಕಂಡರೆ
ತನ್ನಷ್ಟಕ್ಕೆ ಮೂಡುವುದು ಕಣ್ಣುಗಳಲಿ
ಕಾತುರತೆ-ಹೊಳಪು
ನಿಷ್ಕಲ್ಮಷ ಮನಗಳಲಿ
ಕಾಣುವುದು ಹೊಸ ಹುರುಪು
ತಿಳಿದಿತ್ತು ಅಂದೂ -ಇದು ನನಸಾಗದ ಕನಸೆಂದು
ಕನಸಕಾಣಲು ಯಾವ ಕಟ್ಟುಪಾಡುಗಳೂ ಇಲ್ಲವೆಂದು
ಮುದನೀಡುವ ನೆನಪುಗಳು, ಕನಸಕಾಣುವ ಮನಸುಗಳು
ಆಗ ಬೇಕಿಲ್ಲ ಎಲ್ಲರ ಕಾಡುವ ವ್ಯಥೆಗಳು
ನಮಗೆ ತಿಳಿದಿದೆ ..ನಿಮಗೂ ತಿಳಿದಿರಲಿ
ಹೀಗೂ ಹುಟ್ಟಬಹುದು ಪ್ರೇಮ ಕಥೆಗಳು.

Thursday, March 5, 2009

ಬಿಟಿಎಸ್-ಬಸ್ಸಿನಲ್ಲೊಮ್ಮೆ

ಬಿ.ಟಿ.ಎಸ್. ಬಸ್ಸಿನಲ್ಲಿ
ಬಹಳ ವರ್ಷಗಳ ನಂತರ ಬಿ.ಟ್.ಎಸ್ ನಲ್ಲಿ ಪ್ರಯಾಣ ಮಾಡೋ ಅವಕಾಶ ಅಂದೊ ಕೂಡಿಬಂದಿತ್ತು. ಹಾಗೇ..ಈ ವರೆಗೆ ನನ್ನ ಸ್ನೇಹಿತರು ಹೇಳಿತ್ತಿದ್ದುದು ಅಕ್ಷರಶಃ ಸತ್ಯ ಅನ್ನೋದನ್ನು ತಿಳಿಯೋ ಅವಕಾಶ ಸಹಾ ಸಿಕ್ಕಿತ್ತು.
ಹತ್ತು ವರ್ಷಗಳಿಂದ ದೇಶದ ಪೂರ್ವೋತ್ತರ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ಈಗ ಒಂದು ವಾರದ ಹಿಂದೆ ಮದ್ರಾಸಿಗೆ ವರ್ಗವಾಗಿತ್ತು. ಆ ದಿವಸ ನನ್ನ ಸ್ಕೂಟರ್ ನನ್ನ ಗೆಳೆಯನೊಬ್ಬ ಕೆಲಸನಿಮಿತ್ತ ತೆಗೆದುಕೊಂಡು ಹೋಗಿದ್ದ, ಹಾಗಾಗಿ ಬಿ.ಟಿ.ಎಸ್ ನಲ್ಲಿ ಪ್ರಯಾಣಿಸುವ ಸದವಕಾಶ. ಸರಿ ಮೆಜೆಸ್ಟಿಕ್ಕಿಗೆ ಬಸ್ ಹತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಬಂದಾಗ ಕಂಡಕ್ಟರಿಗೆ "ಮೆಜೆಸ್ಟಿಕ್" ಅಂತ ಹೇಳಿ ಹತ್ತರ ನೋಟು ಕೊಟ್ಟೆ. ಚಿಲ್ಲರೆ ಜೊತೆ ಟಿಕೆಟ್ ಕೊಟ್ಟರು ಕಂಡಕ್ಟರ್. ನನ್ನ ಮುಂದೆ ನಿಂತಿದ್ದ ಸಹ ಪ್ರಯಾಣಿಕನಿಗೆ ಕೇಳಿದೆ.."ಹಲೋ ಸರ್..ಈ ಬಸ್ಸು ಮಾರ್ಕೆಟ್ ಮಾರ್ಗ ಹೋಗುತ್ತಾ?"...ಆತ ಪಿಳಿ ಪಿಳಿ ಕಣ್ಣು ಬಿಟ್ಟ..ಬಹುಶಃ ಸರಿಯಾಗಿ ಕೇಳ್ಸಿರಲಿಕ್ಕಿಲ್ಲ ಅಂತ ಮತ್ತೆ ಕೇಳಿದೆ, ಮತ್ತದೇ ನಿರ್ಲಿಪ್ತ ಭಾವ...ಮತ್ತೆ..ಇಂಗ್ಲೀಷಿನಲ್ಲಿ ಕೇಳಿದೆ...ತಕ್ಷಣ.."ಯಾ..ಯಾ..ದಿಸ್ ಗೋಸ್ ವಯ ಮಾರ್ಕೆಟ್ ..ಬಟ್ ಯು ನೋ..ಐ ಡೋನ್ಟ್ ನೋ ಕನ್ನಡ" ಎಂದ..ನನಗೆ ಸ್ವಲ್ಪ ರೇಗಿತು..ಅಲ್ಲ ಇಂಗ್ಲೀಷಿನಲ್ಲಿ ಉತ್ತರ ಕೊಟ್ಟ..ಸರಿ..ಆದರೆ ನನಗೆ ಕನ್ನಡ ಬರೋದಿಲ್ಲ ಅಂತ..ರಾಜಾ ರೋಷವಾಗಿ ಅದೇ ಒಂದು qualification ಅನ್ನೋ ತರಹ ಹೇಳ್ತಿದ್ದಾನಲ್ಲ ಅಂತ. "ಮತ್ತೇನು ನೀವು ಇಂಗ್ಲೀಷಿನವರೇ...??" ಕೇಳಿದೆ..."pardon me..??" ನಾನು ಕೇಳಿದ ರೀತಿ ಮತ್ತು ನನ್ನ ಧಾಟಿಯಿಂದ ಅವನಿಗೆ ಅರ್ಥವಾದ್ರೂ ಆಗದವನಂತೆ..ಏನು ಹೇಳಿದ್ರಿ..? ಅನ್ನೋ ತರಹ ಕೇಳಿದ...ನನಗೂ ನನ್ನ ವರ್ತನೆ ಸರಿಯಿಲ್ಲ ಎನ್ನಿಸಿ.."I mean are you from north India..?" ಎಂದೆ. "ನೋ ಐಯಾಮ ಫ್ರಂ ಆಂಧ್ರ" ಎಂದ. "ಓ ಹಾಗೋ...ಎಷ್ಟು ವರ್ಷ ಆಯ್ತು ನೀವು ಬೆಂಗಳೂರಿಗೆ ಬಂದು..?" ಎಂದೆ. ಮತ್ತೆ ಪಿಳಿ..ಪಿಳಿ..ನಾನು ಮತ್ತೆ.."how long you are in Bangalore..?" ಅಂತ ಇಂಗ್ಲಾಂತರಿಸಿದೆ...ಅದಕ್ಕೆ ಆ ಮಹಾಶಯ.." last six years" ಎಂದ. "ಮತ್ತೆ ಅಲ್ಪ ಸ್ವಲ್ಪ ಕನ್ನಡ ಕಲಿತಿರಬೇಕಲ್ವಾ..?"..ಅವ ನನ್ನ ಮುಖ ನೋಡ್ದಾಗ ನನ್ನ ತಪ್ಪಿನ ಅರಿವಾಗಿ.."by now you must have learnt a little bit of Kannada.." ಎಂದೆ. " no..I dont feel it is necessary..every one here speaks English or Hindi" ಎಂದ. "ಎಲಾ ಇವನ..!! ಕನ್ನಡ ನಾಡಿನಲ್ಲಿ ಕನ್ನಡ ಕಲಿಯೋ ಅವಶ್ಯಕತೆ ಇಲ್ಲ ಅಂತ ಎಷ್ಟು ಧೀಟಾಗಿ ಹೇಳ್ತಾ ಇದ್ದಾನೆ..?"...ಎನ್ನಿಸಿ ನಾನು ಇನ್ನೇನೋ ಕೇಳೋ ಮೊದಲೇ..ಅವನ ಪಕ್ಕದಲ್ಲಿದ್ದಾತ (ಅವನ ಸ್ನೇಹಿತ ಅಂತ ಕಾಣುತ್ತೆ) .."ಇತನಿಕೇಮಂಟ ಮನಮು ಕನ್ನಡಂಲೋ ಮಾಟಲಾಡಲೇದನಿ ಕೋಪಮಾ..?"..ಅಂದ...ನನಗೆ ಪಿತ್ತ ನೆತ್ತಿಗೇರಿತ್ತು..."ಕಾದಂಡಿ..ಕರ್ನಾಟಕಮುಲೋ ವಾಸಿಂಚಿ..ಇಕ್ಕಡ ಉದ್ಯೋಗಂ ಚೇಸೇ ಮೀಕು..ಕನ್ನಡಂ ನೇರ್ಚುಕೋವಾಲಿ ಅನಿ ಅನಿಪಿಂಚಲೇದ..?" (ಆಲ್ರೀ..ಕರ್ನಾಟಕದಲ್ಲಿ ವಾಸಿಸಿ ಇಲ್ಲಿ ಉದ್ಯೋಗದಲ್ಲಿರೋ ನಿಮಗೆ ಕನ್ನಡ ಕಲಿಯಬೇಕು ಎನಿಸಿಲ್ಲವೇ..?) ಎಂದೆ. ನನ್ನ ತೆಲಗನ್ನು ಕೇಳಿ ಆತ ದಂಗಾದ ಅಂತ ಕಾಣುತ್ತೆ.." ಮೀಕು ಇಂತ ಬಾಗಾ ತೆಲುಗು ವಸ್ತುಂದೇ,,?? (ನಿಮಗೆ ಇಷ್ಟು ಚನ್ನಾಗಿ ತೆಲುಗು ಬರುತ್ತದಲ್ಲಾ)" ಅಂತ ಹುಬ್ಬೇರಿಸಿದ. ನಾನು ಕನ್ನಡದಲ್ಲೇ "ನಿಮ್ಮ ವಿಜಯವಾಡ ದಲ್ಲಿ ಕೆಲಸದ ಮೇಲೆ ಆರು ತಿಂಗಳು ಇರಬೇಕಾದಾಗ ಕಲಿತಿದ್ದೆ" ಎಂದೆ. ಅವನಿಗೆ ಆಶ್ಚರ್ಯ ವೆಂಬತೆ ಈ ಗ ನಾನು ಹೇಳಿದ್ದು ಅರ್ಥವಾಗಿತ್ತು. ನಮ್ಮ ಮಾತು ಆಲಿಸುತ್ತಿದ್ದ ಇನ್ನೊಬ್ಬ ಹಿರಿಯ ವಯಸ್ಸಿನವರು.."ಅದೇ ಸಾರ್ ನಾವು ಕನ್ನಡಿಗರು ಮಾಡೋ ತಪ್ಪು...ನಾವು ಬೇರೆಡೆ ಹೋದಾಗ ಅಲ್ಲಿನವರ ಜೊತೆ ವ್ಯವಹರಿಸಬೇಕಲ್ಲಾ ಅಂತ ಅವರ ಭಾಷೇನ ಕಲೀತೀವಿ..ಅದೇ ನಮ್ಮ ನಾಡಗೆ ಬರುವ ಬೇರೆ ಭಾಷಿಗರಿಗೆ ಆ ಭಾವನೆ ಬರುವಂತೆ ಮಾಡುವುದರಲ್ಲಿ ವಿಫಲರಾಗುತ್ತೇವೆ...ಈಗ ನಿಮ್ಮನ್ನೇ ತೆಗೆದುಕೊಳ್ಳಿ ...ಆತನಿಗೆ ಬರಲಿಲ್ಲ ಅಂತ ತೆಲಗಲ್ಲಿ ಸಂಭಾಷಿಸಿದಿರಿ...ಇವರಿಗೆ ಕನ್ನಡದ ಅವಶ್ಯಕತೆ ಎಲ್ಲಿ ಬರಬೇಕು ಹೇಳಿ ?..ಹೀಗೇನೇ ನಾವು ಪಂಚಭಾಷಿಗಳಾಗುತ್ತೇವೆ...ಬಹುತೇಕ ಕನ್ನಡಿಗರಿಗೆ ಹೊರಗಿನವನ ಜೊತೆ ಆಗಂತುಕ ಭಾಷೆಯಲ್ಲಿ ಮಾತನಾಡಿಸಿದರೆ ಆತ ಖುಷಿಪಡುತ್ತಾನೆ ಅಂತ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ, ಕನ್ನಡಿಗರೆಲ್ಲಾ ಹೀಗೇನೇ ಎಂದುಕೊಳ್ಳುವ ಹೊರಗಿನವರೂ ಇಲ್ಲಿಗೆ ಬರುವುದಕ್ಕೆ, ನೆಲಸುವುದಕ್ಕೆ, ವ್ಯವಹರಿಸುವುದಕ್ಕೆ ಹಿಂಜರಿಕೆಯಿರುವುದಿಲ್ಲ ಇದು ಒಂದು ರೀತಿ ಅಂತ್ಯ-ಹೀನ ವರ್ತುಲವಾಗುತ್ತೆ ..ಆ ವರ್ತುಲದಲ್ಲಿ ಕಳೆದು ಹೋಗುವುದು ಕನ್ನಡ...!!! ಇಂತಹ ವಾತಾವರಣದಲ್ಲಿ ಇಲ್ಲದಂತಾಗುವುದು ಕನ್ನಡಿಗರು...!! ಈ ದಿನ ಬೆಂಗಳೂರಿನಲ್ಲಿ ಕನ್ನಡಿಗರು ಶೇ. ೫೦-೬೦ ಮಾತ್ರ, ಅದರಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಶೇ. ೪೦-೫೦ ಮಾತ್ರ. ಯಾತಕ್ಕೆ ಹೇಳಿ..? ನಿಮ್ಮಂತಹ ಕನ್ನಡಿಗರೂ ವ್ಯವಹಾರದಲ್ಲಿ, ತಮ್ಮ ಮುಂದಿರುವವನಿಗೆ ಅನುಕೂಲವಾಗಲಿ ಅಂತ ಇತರ ಭಾಷೆನೇ ಬಳಸೋದರಿಂದ.. ಹಾಗಂತ ನಾವು ಕೆಲವು ಇತರ ಭಾಷಿಗರ ತರಹ ದುರಭಿಮಾನಿಗಳಗಬೇಕು ಎನ್ನುತ್ತಿಲ್ಲ.. ಆದರೆ ನಮ್ಮ ಭಾಷೆಯನ್ನು ಇತರರ ಮನಸೊಪ್ಪುವ ರೀತಿ ಅವರಿಗೆ ತೊಂದರೆಯಾಗದಂತೆ ಬೆಳೆಸುವುದರಲ್ಲಿ ತಪ್ಪೇನಿದೆ..? ನಾವು ಇತರ ದೇಶಕ್ಕೆ ಹೋದರೆ ಅಲ್ಲಿ ಅವರ ಭಾಷೆಯ ಪ್ರಾಥಮಿಕ ಹಂತದ ಪರಿಣಿತಿಯನ್ನು ಹೊಂದಬೇಕಂತೆ...ಇಲ್ಲಿ ..ಕಡೇ ಪಕ್ಷ ಕನ್ನಡದಲ್ಲಿ ಸಂಭಾಷಿಸಿದರೆ ಏನು ತಪ್ಪು..? ನಮ್ಮಲ್ಲೇ ಹುಳುಕಿದ್ದು..ಸರ್ಕಾರ..ಮತ್ತು ಇತರ ಭಾಷಿಗರನ್ನು ದೂರುವುದು ನಮಗೆ ಸಲ್ಲದು. ಕನ್ನಡಿಗರು ತಮ್ಮ ತಮ್ಮಲ್ಲಿಯೇ ಕನ್ನಡದಲ್ಲಿ ಮಾತನಾಡಿಕೊಳ್ಳುವರೇ..ಎಂದು ನನಗೆ ಸಂಶಯವಾಗುತ್ತದೆ..ಇನ್ನು ಬೇರೆಯವರನ್ನು ದೂರುವುದು ಸರಿಯಲ್ಲ.." ಹಿರಿಯರ ಈ ಸುದಿರ್ಘ ವಿಮಶರ್ಷೆ ಹಲವರಿಗೆ ಹಿಡಿಸಿತು..ಚಪ್ಪಾಳೆ ಸದ್ದು ಕೇಳಿ..ಅರೆರೆ..ಅಂದರೆ ಸುಮಾರು ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತೆ...ಮತ್ತೆ...ನಾನು ನನ್ನ ಸಹ ಪ್ರಯಾಣಿಕನೊಡನೆ ಮಾತನಾಡುವಾಗ ಇವರೆಲ್ಲ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಲ್ಲಾ..? ಅರ್ಥವಾಗಲಿಲ್ಲ!!!..ಏಕೆ ಕನ್ನಡಿಗರಿಗೆ ಈ ಕೀಳರಿಮೆ...ಎಂದು ಇವರಲ್ಲಿ ಭಾಷಾಭಿಮಾನ ಜಾಗೃತಗೊಳ್ಳುವುದು? ಕೆಲವೊಮ್ಮೆ ಪರಸ್ಪರ ಕನ್ನಡದವರೇ ಎಂದು ಗೊತ್ತಿದ್ದರೂ..ಬೇರೆಯವರ ಎದುರಲ್ಲಿ..ಮೂರನೇ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಕನ್ನಡಿಗರ ಈ ಕೀಳರಿಮೆ ಅಥವಾ ಸಂಕೋಚವೇ ಕಾರಣ ಎನ್ನಿಸುತ್ತದೆ. ನಮ್ಮನಮ್ಮಲ್ಲಿ ಹೆಮ್ಮೆಯಿಂದ ಕನ್ನಡದಲ್ಲಿ ವ್ಯವಹರಿಸುವ ಮೊದಲ ಪಾಠವನ್ನು ಕನ್ನಡಿಗರು ಮನನ ಮಾಡಿಕೊಳ್ಳಬೇಕು, ಇತರರೊಡನೆ ಮೊದಲಿಗೆ ಕನ್ನಡದಲ್ಲಿ ವ್ಯವಹರಿಸಿ, ಯಾರಿಗೆ ಗೊತ್ತು ಮುಂದಿರುವವರಿಗೆ ಕನ್ನಡ ಬರಬಹುದೇನೋ?..ಎಲ್ಲರೂ ಇದನ್ನು ಪರಿಪಾಲಿಸಿದರೆ ಬಹುಶಃ ಬೇರೆಭಾಷಿಗರು ಕನ್ನಡ ಕಲಿಯಲು ಮುಂದಾಗಬಹುದು..ಭಾಷೆ ಬೆಳೆಯುವುದು ಹೀಗೆ..

Wednesday, March 4, 2009

ಕವನಗಳು

ನನ್ನ ಕನಸಿನ ನಾಡು
ಮೋಹನ ಮುರುಳಿ ಸಮ್ಮೋಹಿಸಿತು ಗೋವುಗಳ..
ಅವುಗಳಿಗೆ ನಾದವೇ ಭಾಷೆ, ನಾವೇಕೆ ಹೀಗೆ?
ಮಾಮರದ ವಸಂತ ಋತುವಿಗೆ
ಕೋಗಿಲೆಯ ಕುಹೂ ಕುಹೂವೇ ಭಾಷೆ,
ನಾವೇಕೆ ಹೀಗೆ?
ಹೂಬನದ ಕುಸುಮ
ಸುಗಂಧವೇಗುಂಯ್ ಗುಡುವ ಭ್ರಮರಕ್ಕೆ ಬಾಷೆ,
ನಾವೇಕೆ ಹೀಗೆ?
ಗೊತ್ತಿದ್ದೂ ಎಲ್ಲ ಕನ್ನಡಿಗರೆಂದೇ
ನಾಡು ನುಡಿ - ಪರಭಾಷೆಯ
ಪರನಾಡ ಗಡಿಯೊಳಗೆ..ನಮ್ಮವರೊಂದಿಗೇ
ಪರಭಾಷೆಯ-ಕುಶಲೋಪರಿ......
ಕೀಳರಿಮೆ..ಕಳಂಕವೆಂಬ ಹುಸಿಬಿಂಕವೋ?
ತೋರಿಕೆಯ ಏಳುಬೀಳುವ..ಹುಂಬತನವೋ?
ಪರನಾಡೇಕೆ?..
ನಮ್ಮ ಕೆಂಪೇಗೌಡರಬೆಂದಕಾಳೂರಲಿ..
ಕಾಲ್ಮುರಿದು..ಕುಂಟುವಂತೆ ಮಾಡಿದ
ನಮ್ಮ ಭಾಷಾ ಕಾಳಜಿಯ ಕಂಡು
ಕೇಳುತ್ತಿಲ್ಲವೇ ಕನ್ನಡಮ್ಮ
ನನ್ನ ಕಂದಮ್ಮಗಳೇ....
ನೀವೇಕೆ ಹೀಗೆ?


ನೀರು-ಮೂರು

ಜಲ-ನಿಧಿ
ಮೋಡ ನೋಡ..
ನೋಡುತ್ತಿದ್ದಂತೆ ಆಗಸದಿ
ಕಾಣದಂತಿದ್ದುದು ಕಂಡು
ಬಿಳಿಹೊಗೆಯಾದದ್ದು,
ಬಿಳಿ ತೆಳು ಸೀರೆ ಯುಟ್ಟದ್ದು
ಹತ್ತಿಯ ಮೆತ್ತೆಯೊಳಗೆ
ಸೂರ್ಯಕಿರಣದೊಡನೆ
ಕಣ್ಣಾ ಮುಚ್ಚಾಲೆಯಾಡಿದ್ದು
ಕ್ರಮೇಣ ಮಣ್ಣಮೆತ್ತಿದಂತಾದದ್ದು
ನಡು ಕಂದು, ಕಡು ಕಪ್ಪು ತಿರುಗಿದ್ದು
ಗಾಳಿಯೊಡನೆ ಬೆರೆತದ್ದು
ದಿಗಂತಕೆ ಓಕುಳಿಯೆರಚಿದ್ದು
ಕರಗಿದ್ದು, ಕರಗಿ ಹನಿಯಾದದ್ದು
ಎಲ್ಲೋ ಆಸೆ ಹುಟ್ಟಿಸಿ
ಮತ್ತೆಲ್ಲೋ ಹನಿಸಿ ಮಳೆಗರೆದದ್ದು
ಒಂದೆಡೆ ಅತಿ, ಮತ್ತೊಂದೆಡೆ ಮಿತಿ
ಮಗದೊಂದೆಡೆ ಮರೀಚಿಕೆ ಯಾದದ್ದು
ಅಲ್ಲಿ ಜೋಗ, ಇನ್ನೆಲ್ಲಿಯೋ ರೋಗ
ಆಗಿ ಗಂಗೆ, ತುಂಗೆ ಜಲೋಗಮ ಸ್ಥಾನ
ಕೆಲವೆಡೆ ನೀರೇ ಕಾಣದ ರಾಜಾಸ್ಥಾನ
ಕುಡಿಯಲು, ಬೆಳೆಯಲು,
ಮಲಿನ ತೊಳೆಯಲು - ಮಾಡಿದ್ದು ವಿಧಿ
ಕೆಲವರಿಗಿದು ಜಲ ಮತ್ತನೇಕರಿಗಿದು ನಿಧಿ