Wednesday, September 11, 2013

ಗೋಂದಲ ಎಲ್ಲಿ? ಏಕೆ??

ಸ್ನೇಹಿತರೇ ಬಹಳ ದಿನಗಳ ನಂತರ ಭಾವ-ಮಂಥನದಲಿ ಮಂಥನ ಮಾಡುವ ಇಂಧನ ಕೊಟ್ಟ ಬದರಿ ಪಲವಳ್ಳಿಗೆ ಆಭಾರ ವ್ಯಕ್ತಪಡಿಸುತ್ತಾ..ಕೆಲ ಸಾಲುಗಳು...ಈ ದಿನದ ನಮ್ಮ ಗೋಂದಲಮಯ (ಗೊಂದಲಕ್ಕೆ ಅಂಟಿಕೊಂಡ ಎನ್ನುವ ಪ್ರಯೋಗ) ಸಮಾಜದ ಪರಿಸ್ಥಿತಿಯನ್ನು ಕವನಿಸಿದ್ದೇನೆ.....

ಗೋಂದಲ ಎಲ್ಲಿ? ಏಕೆ??

ಕಥೆಯಾಳದ ಕಮರಿಯಲ್ಲಿ ಮುಳುಗಿ
ಕಳೆದು ಹೋಗುವುದು ಪಾತ್ರದ ವ್ಯಥೆ
ಶಾಯಿಯ ಬಣ್ಣ ಬಿಳಿ ಹಾಳೆಯನಾಳಿ
ಎಲ್ಲರೂ ಹಾಯಿ, ಬಡವಗೆ ಮಾತ್ರ ವ್ಯಥೆ

ಕಾರಿರುವರಿಗೆ ಪೆಟ್ರೋಲ್ ಚಿಂತೆಯೇ
ತಿಂದು ಚಲ್ಲಾಡುವಗೆ ಗ್ಯಾಸ್ ಭಯವೇ
ಕಟ್ಟಿಗೆಗೆ ಕಾಡಿಲ್ಲ ಉರಿಸಲೂ ಸೀಮೆಣ್ಣೆ
ಗುಡಿಸಿಲ ಬವಣೆ ಮಹಲಿಗಿಲ್ಲ ಕರುಣೆ

ಮುಖವಾಡ ಕಾಣುವುವು ಕಾಳಜಿತೋರಿ
ಸುಖವಾದ ಅವರದು ಬೇಯ್ಸಿ ಕೊಳ್ಳಲು
ಇವರಿಗವರನು ಅವರಿಗಿವರನು ಬಳಸಿ
ಕೆಲ ಮಂದಿಗೆ ಇದುವೇ ದಿನದ ದಿನಸಿ

ಗಾಂಧಿ ಹೆಸರಲಿ ಖಾದಿ ತೊಟ್ಟವರು
ನ್ಯಾಯವಾದ ಕರಿಕೋಟ ಉಟ್ಟವರು
ಗೃಹ ರಕ್ಷಕನೂ ಆಗಿಬಿಟ್ಟರೆ ಭಕ್ಷಕ ಹೀಗೆ
ಸಾಮಾನ್ಯನು ಬಾಳುವುದಾದರೂ ಹೇಗೆ?

ರಾಮ ತಾನೂ ಕಾಣದಾದ ರಾಮ ರಾಜ್ಯ
ಸೀತೆಗೂ ಬವಣೆ ಆಗಲಿಲ್ಲವೇ ಆವಳೂ ತ್ಯಾಜ್ಯ?
ಗಾಂಧಿ ಕೊಟ್ಟ ಮಂತ್ರ ಆಳುವವಗೆ ಅಂದು
ಶ್ರೀರಕ್ಷೆ ಆಗಿದೆ ಗೋಳು ಹುಯ್ಯಲು ಇಂದು