Tuesday, July 20, 2010

ಮಗುವಿರಬೇಕು

ಪ್ರತಿ ಮನದಲಿ ಒಂದು ಮಗುವಿರಬೇಕು



ಮನ ಕಲಕು, ಮೆಲುಕು ಪಲುಕುತಿರಬೇಕು


ನಗು ಒಳಿತಿಗೆ ಕೆಡಕಿಗೂ ಉಕ್ಕುತಿರಬೇಕು


ಅದ ಅರಿತಂತಿದ್ದೂ ಮರೆಯುವಂತಿರಬೇಕು



ಅಪ್ಪ ಅಮ್ಮಗೆ ಚುಮ್ಮ ಕೊಡುತಿರಬೇಕು


ಬೆಳೆದರೂ ಬಲಿತರೂ ತುಂಬೊಲವಿರಬೇಕು


ಅಣ್ಣನಾದರೂ ತಮ್ಮ ಅಕ್ಕನಾದರೂ ತಂಗಿ


ಎಲ್ಲಬಲ್ಲವನಾದರೂ ಅರಿಯದಂತಿರಬೇಕು



ತುಂಬು ಮನದ ನಿರ್ಮಲ ಮಗುವಿನ ನಗುವಿರಬೇಕು


ಸಹಾಯ ಬೇಡದೆಯೂ ಎಲ್ಲರಿಗೆ ಸಿಗುತಿರಬೇಕು


ತನ್ನಳಲ ಬಿಸಿಲಲ್ಲಿಟ್ಟುಸುಟ್ಟು ನೆಚ್ಚಿದವರಿಗೆ ನೆಳಲ


ಬಿಳಲು ಬಿಟ್ಟು ತಂಪನೆರೆವ ಹರಡಿದಾಲದಂತಿರಬೇಕು



ಕರೆಯದೇ ಬರುವ ಆಪತ್ತಿಕಾದವನಂತಿರಬೇಕು


ಮರೆಯದೇ ನೆನೆವ, ಕೊಟ್ಟದ್ದ ಮರೆತಂತಿರಬೇಕು


ಉರಿವ ಧೂಪ, ತೇಯ್ವ ಸುಗಂಧದಂತಿರಬೇಕು


ಇರಬೇಕು, ಇರಬೇಕು ಪ್ರತಿ ಮನದಲ್ಲೂ ಮಿಡಿವ


ಮುಗ್ಧ, ತುಂಬು ನಗುವಿನ ಮಗುವಿರಬೇಕು.

30 comments:

  1. ನನ್ನೊಳಗಿನ ಮುಗ್ಧ ಮಗುವನ್ನ ಕೂಡ ಎಚ್ಚರಿಸಿದಿರಿ :) ಚಂದದ ಕವನ ಭೈಯ್ಯ

    ReplyDelete
  2. ಅಜಾದ್,

    ಎಷ್ಟು ಸತ್ಯ ಅಲ್ವಾ! ನನ್ನೊಳಗಿನ ಮಗುತನವನ್ನು ಎಚ್ಚರಿಸುವುದರ ಜೊತೆಗೆ ನಿಮ್ಮೊಳಗಿನ ಮಗುವನ್ನು ಕವನದ ಮೂಲಕ ಎಚ್ಚರಿಸಿದ್ದೀರಿ.

    ReplyDelete
  3. ಜಲನಯನ,
    ನಮ್ಮೊಳಗಿನ ಮಗುವನ್ನು ನಾವು ಬಲವಂತವಾಗಿ ಮಲಗಿಸಿ ಬಿಟ್ಟಿದ್ದೇವೆ.
    ಈ ಮಗು-ಮನಸ್ಸು ಎಚ್ಚರವಾದರೆ ಬಾಳೆಲ್ಲ ಎಳೆಬಿಸಿಲಾದೀತು,ಅಲ್ಲವೆ?

    ReplyDelete
  4. ನಮ್ಮೊಳಗಿನ ಮಗುವಿನ ಮುಗ್ಧತೆಗೆ ಕನ್ನಡಿ
    ಸುಂದರ ಕವನ

    ReplyDelete
  5. ಚೆನ್ನಾಗಿ ಬರ್ದೀದೀರಾ ಆಜಾದಣ್ಣ

    ReplyDelete
  6. ಆಜಾದ್ ಸರ್,
    ಹೌದು ಮಗುವಿನ ಮನಸು, ಮಗು ಎರಡೂ ಇದ್ದಾರೆ ಎಷ್ಟು ಚೆನ್ನ ಆಲ್ವಾ.... ಸುಂದರ ಕವನಕ್ಕೆ ಧನ್ಯವಾದ ಸರ್.....

    ReplyDelete
  7. ರಂಜು...ನೀನ್ನ ಮೊದಲ ಪ್ರತಿಕ್ರಿಯೆಗೆ ನನ್ನ ಮೊದಲ ಧನ್ಯವಾದ...ನನಗೆ ನನ್ನ ಮನದ ಮಗುವನ್ನು ಆಗಾಗ್ಗೆ ಎಚ್ಚರಿಸಿ ಸ್ವಲ್ಪ ಮಗುವಾಗುವುದು ಬಹಳ ಇಷ್ಟ.....ನಿನಗೂ ಹಾಗೇ ಆಗಲಿ...ಹಾಗೇ ಎಲ್ಲರಿಗೂ....ರಾಗ ದ್ವೇಷ ಇರೊಲ್ಲ..ಅಲ್ವೇ,..?

    ReplyDelete
  8. ಶಿವು ..ಮಕ್ಕಳೊಂದಿಗೆ ನಾವು ಆಡುತ್ತೇವಲ್ಲ ಆಗ ನಾವು ಮಗುವಿನ ಮನಸ್ಸಿನವರಾಗದಿದ್ದರೆ....?? ಮಗು ನಮ್ಮೊಂದಿಗೆ ಆಡುವುದೇ ಇಲ್ಲ ...ಹಹಹ ಇದೇ ಜೀವನ....

    ReplyDelete
  9. ಸುನಾಥಣ್ಣ ಎಷ್ಟು ವಾಸ್ತವವಾದ ಮಾತು..!!! ನಾವು ಬಲವಂತವಾಗಿ ನಮ್ಮ ಮನದ ಮಗುವನ್ನು ಮಲಗಿಸಿದ್ದೇವೆ....ಅದಕ್ಕೇ ಸುಳ್ಳಿಗೆ ಕಪಟಕ್ಕೆ ನಮಗೆ ಭಂಡ ಧೈರ್ಯ....ಅದೇ ಮಗು ಎಚ್ಚರವಿದ್ದರೆ ಸಾಧ್ಯವಾಗುವುದಿಲ್ಲ... ಧನ್ಯವಾದ...ನಿಮ್ಮ ಪ್ರೋತ್ಸಾಹಕ್ಕೆ.

    ReplyDelete
  10. Dr. Guru Thanks...like ever...neevu always..there to register your comments...

    ReplyDelete
  11. ಮಹೇಶಣ್ಣ... ನಿಜ ಅಲ್ವಾ....ಮನಸು ಮಗುವಾದ್ರೆ..ಕಡೇ ಪಕ್ಷ ದಿನದ ಒಂದೆರಡು ಘಂಟೆ....ಆ ಅನಂದವೇ ಬೇರೆ ಅಲ್ಲವೇ..?

    ReplyDelete
  12. ದಿಲೀಪ್...ಧನ್ಯವಾದ... ಅಹ್ಹಹ್ಹ....ನನ್ನ ಮಗುವಾಗೋಕೆ ಬಿಡೊಲ್ಲ ನೀವು...ಅಣ್ಣ ಅಂತ ಹೇಳಿ....ಓಕೆ..ನೀವಾದರೂ ಆಗಿ ಮಗು...

    ReplyDelete
  13. ದಿನಕರ್...ಅಣ್ಣಾವ್ರ ಹಾಡು ನೆನಪಾಯ್ತು ನಿಮ್ಮ ಪ್ರತಿಕ್ರಿಯೆ ನೋಡಿ...ಎಂಥಾ ಸೊಗಸು ಮಗುವಿನ ಮನಸು....? ಧನ್ಯವಾದ.

    ReplyDelete
  14. ಮಗುವಿನ ಕವನದಲ್ಲಿ ಬರುವ "ಬೆಳೆದರೂ ಬಲಿತರೂ ತುಂಬೊಲವಿರಬೇಕು" ಎನ್ನುವ ಮಾತು ತು೦ಬಾ ಪರಿಣಾಮಕಾರಿಯಾಗಿದೆ. ಮುಗ್ದತೆಯ ಜಾಗವನ್ನು ಪ್ರಬುದ್ಧತೆ ಆಕ್ರಮಿಸಿಕೊ೦ಡಾಗ "ಮಗುವಿನ ಮನಸು" ಮರೆಯಾಗಿ ಬಿಡುತ್ತದೇನೋ..ಒಳ್ಳೆಯ ವಿಚಾರ ಅಜಾದ್ ಸರ್..

    ಅನ೦ತ್

    ReplyDelete
  15. ನನ್ನ ಬ್ಲಾಗಿಗೆ ಸ್ವಾಗತ ಅನಂತರಾಜ್ ಸರ್...ಹೌದು ಬಲಿತರೂ ಬೆಳೆದರೂ ತುಂಬಿದ ಒಲವು ತೋರುವವನದು ನಿಜಕ್ಕೂ ಮಗುವಿನ ಮನಸಿಗೆ ಹತ್ತಿರದವನು. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ..

    ReplyDelete
  16. ಸುಂದರ ಕವನ..ಮನ ಯಾವಾಗಲು ಮಗುವಾಗಿರಬೇಕು...
    ನಿಮ್ಮವ,
    ರಾಘು.

    ReplyDelete
  17. ತುಂಬು ಲಾಲಿತ್ಯದ ಶಬ್ದ ಗಾರುಡಿಗತನದ ಅದ್ಭುತ ಕವನ! ಜೊತೆಗೆ ಮನದಲ್ಲಿ ಮಗುವಿರಬೇಕು ಮತ್ತು ಹೇಗಿರಬೇಕು ಅಂಥಾ ನೀತಿಯ ಪಾಠ ಬೇರೆ ಸ್ವಾಸ್ತ್ಯ ಸಮಾಜಕ್ಕೆ!
    ಅದ್ಭುತ ಕವನ! ಧನ್ಯವಾದಗಳು ಅಜಾದರೆ!

    ReplyDelete
  18. ಬಹಳ ಚೆನ್ನಾಗಿದೆ ಆಝಾದ್ ಭಾಯ್.. ನಿಜ ಪ್ರತಿಯೊಬ್ಬರ ಮನದಲ್ಲಿರುವ ಮಗುವು ಜಾಗ್ರುತವಾಗಬೇಕಿದೆ ನಮ್ಮ ಜಗತ್ತಿನಲ್ಲಿ..ಕೊಂಚವಾದರೂ ಮನಸ್ಸಿಗೆ ಶಾಂತಿ ಹಾಗು ಮೊಗದಲ್ಲಿ ನಗುವು ಇಣುಕುವುದೇನೊ ನೊಡೋಣ.. ಅದ್ಭುತವಾದ ಲಿಖಿತ...

    ReplyDelete
  19. "ತನ್ನಳಲ ಬಿಸಿಲಲ್ಲಿಟ್ಟುಸುಟ್ಟು ನೆಚ್ಚಿದವರಿಗೆ ನೆಳಲ
    ಬಿಳಲು ಬಿಟ್ಟು ತಂಪನೆರೆವ ಹರಡಿದಾಲದಂತಿರಬೇಕು"..... ಸಾಲುಗಳು ತುಂಬಾ ಇಷ್ಟವಾದವು ಆಜಾದ್ ಸಾರ್. ನಿಜ್ಜ ನಾವೆಲ್ಲರೂ ನಮ್ಮೊಳಗಿನ ಮಗುವನ್ನು ತಟ್ಟಿ ಮಲಗಿಸಿಯೇ ಬಿಟ್ಟಿದ್ದೇವೆ.... ಎಲ್ಲರೊಳಗಿರುವ ಮಗು ಎಚ್ಚೆತ್ತರೆ ಪ್ರಪಂಚ ಸುಂದರವಾಗಿರತ್ತೆ ಅಲ್ವಾ...? ಎಲ್ಲರ ಮುಖದಲ್ಲೂ ನಗು ತಾನಾಗೆ ನೆಲೆಸತ್ತೆ ಮತ್ತು ನಗು ಸಾಂಕ್ರಾಮಿಕ ಎಂದು ನಾನು ನಂಬುತ್ತೇನೆ...
    ಧನ್ಯವಾದಗಳು....

    ಶ್ಯಾಮಲ

    ReplyDelete
  20. ಅಜಾದ್ ಸರ್,
    ತನ್ನ ಮನದೊಳಗೆ ಮಲಗಿರುವ ಮಗುವನ್ನು ಎಬ್ಬಿಸಬೇಕೆಂಬ ನಿಮ್ಮ ನೀತಿ, ರೀತಿ, ಆ ಪ್ರೀತಿ.............
    ಚನ್ನಾಗಿದೆ.

    ReplyDelete
  21. ನೀವು ಹೇಳಿದ್ದಕ್ಕೆಲ್ಲಾ ಅಸ್ತು ಅನ್ನಲೇ ಬೇಕು, ಯಾಕೆಂದರೆ ಅಲ್ಲಿ ನೀವು ಜೋಡಿಸಿಕೊಟ್ಟಿರುವ ಶಬ್ಧಗಳೇ ಹಾಗಿವೆ. ಮಗುವಿನ ಮನೋಧರ್ಮ ಎಲ್ಲರಿಗೂ ಇದ್ದರೆ ಲೋಕ ಉದ್ಧಾರವಾಗಿ ಬಹಳಕಾಳವಾಗುತ್ತಿತ್ತು, ಆದರೂ ಕೆಲವರಾದರೂ ಮಗುವಿನಂತಿರುತ್ತಾರಲ್ಲ, ಅದನ್ನು ಮೆಚ್ಚಬೇಕು, ಅದರಲ್ಲಿ ನೀವೂ ಒಬ್ಬರೆಂದರೆ ತಪ್ಪಲ್ಲ ಅಲ್ಲವೇ, ಇಂತಹ ಹಾಡುಗಳು ಬರುವುದು ಮುಗ್ಧ ಮನದಿಂದ ಮಾತ್ರ ಸಾಧ್ಯ. ಸುಮ್ಮನೇ ಎರಡು ಸಾಲು ಗೀಚಿ ಇದು ಹಾಡು ಎಂದು ಬೋರ್ಡು ತಗುಲಿಸುವವರು ಬಹಳ, ಅದು ಸುಲಭ ಮಾರ್ಗ, ನಾಟಕದ ಧರಣಿ ಇದ್ದ ಹಾಗೇ! ನಿಮ್ಮ ಕವನ ಹಿಡಿಸಿತು, ನಿಮ್ಮ ಈ ಬ್ಲಾಗನ್ನು ಈಗಲೇ ಪ್ರವೇಶಿಸಿದ್ದು, ಚೆನ್ನಾಗಿದೆ, ನಮಸ್ಕಾರ.

    ReplyDelete
  22. ರಾಘು...ಧನ್ಯವಾದ ನಿಮಗೆ ಮೊದಲಿಗೆ ನನ್ನ ಈ ಕವನದ ಮೂಲ ನಿಮ್ಮ ಕವನ.....ಅಲ್ಲಿಂದ ಹುಟ್ಟಿದ ಭಾವವಿದು...ಧನ್ಯವಾದ ನಿಮ್ಮ ಮುಕ್ತ ಅನಿಸಿಕೆಗೆ.

    ReplyDelete
  23. ಸೀತಾರಾಂ ಮನ ತುಂಬಿದರೆ..ಅಹ್ಲಾದವಾದ್ರೆ ನಗು...ಮಗು ನಿದ್ರೆಯಲ್ಲೂ ನಗುತ್ತೆ ..ಆಹಾ ಎಂಥ ಸುಂದರ ನೋಟ ಅದು...!! ಅದಕ್ಕೆ ಕಾರಣ ಕಲ್ಮಶವಿಲ್ಲದ ಮನಸ್ಸು..ಮತ್ತು ಎಲ್ಲ ಮೋಜಿನ ಮಜ...ಹಾಗೇ ಇದ್ರೆ ಎಷ್ಟು ಚೆನ್ನ ಅಲ್ಲವೇ...? ಧನ್ಯವಾದ ನಿಮ್ಮ ಮಾತಿಗೆ

    ReplyDelete
  24. ಮನದಲ್ಲಿ ಮಗುವು ಎಲ್ಲರಲ್ಲೂ ಇದ್ದರೂ ಸುನಾಥಣ್ಣ ಹೇಳಿದ ಹಾಗೆ ಅದನ್ನು ಜಗದ ಒತ್ತಡಗಳಿಗೆ ಘಾಸಿಗೊಳ್ಲದಿರಲೆಂದು ಮಲಗಿಸಿರುವುದು..ಆದ್ರೆ ಆಗ್ಗಾಗ್ಗೆ ಅದನ್ನು ಎಚ್ಚರಿಸಿದರೆ ನಮ್ಮ ಘಾಸಿ ಮಾಯವಾಗುವುದು ದಿಟ...ಧನ್ಯವಾದ ರಮೇಶ್ ನಿಮ್ಮ ಅನಿಸಿಕೆಗೆ.

    ReplyDelete
  25. ಶ್ಯಾಮಲಾವ್ರೆ...ಎಂಥಾ ಸೊಗಸು ಮಗುವಿನ ಮನಸು ಎನ್ನುವುದು ಅದೇ ಕಾರಣಕ್ಕೆ...ಕಪಟವರಿಯದೇ ಇದ್ದರೆ ಎಲ್ಲರೂ ಸ್ನೇಹಿತರೇ..ನಿಜ ನಿಮ್ಮ ಮಾತು ಆ ಮಗು ನಮ್ಮಲ್ಲಿ ಹೆಚ್ಚು ಹೆಚ್ಚು ಜಾಗೃತವಾಗಬೇಕಿದೆ, ಧನ್ಯವಾದ ನಿಮ್ಮ ಮಾತಿಗೆ.

    ReplyDelete
  26. ಮನದಾಳದ ನಿಮ್ಮ ಮಾತಿಗೆ ನನ್ನ ಸಹಮತ...ಪ್ರವೀಣ್. ಅವರಂತೆ ಇವರಂತೆ ಬೇಡ ಮನಸು ಮಗುವಿನಂತಿರಬೇಕು...ಧನ್ಯವಾದ.

    ReplyDelete
  27. ವಿ.ಆರ್.ಬಿ. ಸರ್, ಬಹಳ ಲೌಕಿಕ ಮತ್ತು ಅರ್ಥಭರಿತ ಮಾತು ನಿಮ್ಮವು...ಜಂಜಾಟದಲ್ಲಿ ಆ ಮುಗ್ಧಮನವನ್ನ ಮಲಗಿಸಿದ್ದೇವೆ..ಮಗುವಿಗೆ ಧರ್ಮವಿಲ್ಲ, ರಾಗ ದ್ವೇಷಗಳಿಲ್ಲ ಎಲ್ಲರನ್ನೂ ಎಲ್ಲವನ್ನೂ ನಗುತ್ತಲೇ ಸ್ವೀಕರಿಸುತ್ತದೆ..ನಮ್ಮಲ್ಲಿ ಶೇ.೧೦ ರಷ್ಟಾದರೂ ಮಗುವಿನ ಮನದ ಗುಣ ಜಾಗೃತವಾದರೆ..? ಎಷ್ಟು ಚನ್ನ ಅಲ್ಲವೇ..? ಅಂಥ ಗುಣದವರನ್ನು ಕಂಡುಕೊಳ್ಳುವವರೂ ಅದೇ ಗುಂಪಿಗೆ ಸೇರಿದವರು ಅನ್ನುವುದಕಂತೂ ಎರಡು ಮಾತಿಲ್ಲ...ಹಹಹ...ನಿಮಗೆ ಸ್ವಾಗತ ಭಾವ ಮಂಥನಕ್ಕೆ.

    ReplyDelete
  28. ಜಲನಯನ ,

    ಮುದ್ದಾದ ಕವನ..
    "....ಕಳಬೇಡ ಮಗುವಿನ ನಗುವ.." ಸಾಲು ನೆನಪಿಗೆ ಬಂತು.

    ReplyDelete
  29. ಧನ್ಯವಾದ..."ಕತ್ತಲಮನೆ"...ಸ್ವಾಗತ ನಿಮಗೆ ಭಾವಮಂಥನಕ್ಕೆ...

    ReplyDelete